ADVERTISEMENT

ಟ್ರಾಫಿಕ್ ಸಮಸ್ಯೆ: ಕಟ್ಟುನಿಟ್ಟಿನ ಕ್ರಮ

ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 14:45 IST
Last Updated 1 ಫೆಬ್ರುವರಿ 2019, 14:45 IST
ಗೋಪಾಲಕೃಷ್ಣ ನಾಯಕ
ಗೋಪಾಲಕೃಷ್ಣ ನಾಯಕ   

ಶಿರಸಿ: ನಗರದ ಸಿ.ಪಿ. ಬಜಾರದಲ್ಲಿ ಪಾದಚಾರಿ ಮಾರ್ಗದವರೆಗೂ ಅಂಗಡಿಗಳು ಬಂದಿದ್ದು, ಇದನ್ನು ಸದ್ಯದಲ್ಲಿ ತೆರವುಗೊಳಿಸಲಾಗುವುದು ಎಂದು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಟ್ರಾಫಿಕ್ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುತ್ತದೆ. ಏಕಮುಖ ಸಂಚಾರ, ವಾಹನ ನಿಲುಗಡೆಗೆ ಸದ್ಯದಲ್ಲಿ ವ್ಯವಸ್ಥಿತ ರೂಪ ನೀಡಲಾಗುವುದು. ದ್ವಿಚಕ್ರ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ವಾಹನ ಚಾಲನೆಯ ಸಂದರ್ಭದಲ್ಲಿ ಹೆಲ್ಮೆಟ್‌ ಕಡ್ಡಾಯಗೊಳಿಸಲಾಗುತ್ತದೆ. ಇತ್ತೀಚೆಗೆ ನಡೆದಿರುವ ಹೆಚ್ಚಿನ ಅಪಘಾತಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೇ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಅವಘಡಗಳನ್ನು ಕಡಿಮೆಗೊಳಿಸಬೇಕಾಗಿದೆ’ ಎಂದರು.

ರಸ್ತೆ ಸುರಕ್ಷತೆ, ಸಂಚಾರ ಸುರಕ್ಷತೆಗಾಗಿ ಕೆಲವು ಕಡೆಗಳಲ್ಲಿ ಅತಿಕ್ರಮಣ ತೆರವುಗೊಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ನಗರಸಭೆಯ ವಿಶೇಷ ಸಹಕಾರ ಅಗತ್ಯವಾಗಿದೆ. ಐದು ರಸ್ತೆ ವೃತ್ತ ವಿಸ್ತರಣೆಯಾದ ನಂತರ ಇಲ್ಲಿ ಸಿಗ್ನಲ್ ಲೈಟ್ ಅಳವಡಿಸುವ ಬಗ್ಗೆ ಯೋಚಿಸಲಾಗುವುದು. ಶಿರಸಿಗೆ ಅಗತ್ಯವಾಗಿ ಟ್ರಾಫಿಕ್ ಪೊಲೀಸ್ ಠಾಣೆ ಬೇಕಾಗಿದೆ ಎಂದು ಹೇಳಿದರು.

ADVERTISEMENT

ಗಾಂಜಾ ಮಾರಾಟ ಮಾಡುವ ಜಾಲದ ಬೆನ್ನುಹತ್ತಿದ್ದು, ಮಹತ್ವದ ಸುಳಿವು ಸಿಕ್ಕಿದೆ. ಸದ್ಯದಲ್ಲಿ ಇದನ್ನು ಪತ್ತೆ ಮಾಡಲಾಗುವುದು. ಗಾಂಜಾ ಸೇದುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅನುಮಾನ ಬಂದಲ್ಲಿ ಅವರ ರಕ್ತ ಮಾದರಿ ಸಂಗ್ರಹಿಸಿ, ಪರೀಕ್ಷಿಸಲಾಗುತ್ತದೆ. ಉಪವಿಭಾಗ ವ್ಯಾಪ್ತಿಯಲ್ಲಿ ಸುಮಾರು 50 ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಬೇಕಾಗಿದೆ. ಕಳ್ಳತನ ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಕ್ರಮ ಜಾರಿಗೊಳಿಸಲು ಯೋಚಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.