ADVERTISEMENT

ಪೆರ್ನೆಂ ಬಳಿ ಕುಸಿದಿದ್ದ ಸುರಂಗ ದುರಸ್ತಿ: ರೈಲುಗಳ ಸಂಚಾರ ಆರಂಭ

ಭಾರಿ ಮಳೆಯಿಂದಾಗಿ ಆ.6ರಂದು ಮಣ್ಣು ಕುಸಿದಿತ್ತು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 11:09 IST
Last Updated 16 ಸೆಪ್ಟೆಂಬರ್ 2020, 11:09 IST
ಗೋವಾದ ಪೆರ್ನೆಂ ಬಳಿ ಆ.6ರಂದು ಸುರಂಗದ ಮಣ್ಣು ಕುಸಿದು ರೈಲು ಹಳಿಯ ಮೇಲೆ ಬಿದ್ದಿತ್ತು. ಇದೀಗ ತೆರವು ಮಾಡಲಾಗಿದ್ದು, ರೈಲು ಸಂಚಾರ ಆರಂಭಗೊಂಡಿದೆ (ಪ್ರಜಾವಾಣಿ ಚಿತ್ರ)
ಗೋವಾದ ಪೆರ್ನೆಂ ಬಳಿ ಆ.6ರಂದು ಸುರಂಗದ ಮಣ್ಣು ಕುಸಿದು ರೈಲು ಹಳಿಯ ಮೇಲೆ ಬಿದ್ದಿತ್ತು. ಇದೀಗ ತೆರವು ಮಾಡಲಾಗಿದ್ದು, ರೈಲು ಸಂಚಾರ ಆರಂಭಗೊಂಡಿದೆ (ಪ್ರಜಾವಾಣಿ ಚಿತ್ರ)   

ಕಾರವಾರ: ಗೋವಾದ ಪೆರ್ನೆಂ ಬಳಿ ಕುಸಿದಿದ್ದ ಕೊಂಕಣ ರೈಲ್ವೆಯ ಸುರಂಗದ ದುರಸ್ತಿ ಕಾರ್ಯವು ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ರೈಲು ಸಂಚಾರವು ಪುನರಾರಂಭವಾಗಿದೆ.

ಕೊಂಕಣ ರೈಲ್ವೆಯ ಕಾರವಾರ ವಲಯದಲ್ಲಿರುವ ಈ ಸುರಂಗದಲ್ಲಿ ಆ.6ರಂದು ಮಣ್ಣು ಕುಸಿದಿತ್ತು. ಆದ್ದರಿಂದ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಈ ಮಾರ್ಗದಲ್ಲಿ ಪ್ರಮುಖವಾಗಿ ಸಂಚರಿಸುವ ಆರು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ರೈಲುಗಳು ಮಡಗಾಂವ್– ಲೋಂಡಾ–ಮೀರಜ್– ಪುಣೆ– ಪನ್ವೇಲ್– ಕಲ್ಯಾಣ್ ಮಾರ್ಗದಲ್ಲಿ ಸುತ್ತುಬಳಸಿ ಸಂಚರಿಸುತ್ತಿದ್ದವು.

‘ಈ ಸುರಂಗವು (384ನೇ ಕಿಲೋಮೀಟರ್‌ನಲ್ಲಿರುವ 6–7 ಸಂಖ್ಯೆ) ಮದುರೆ ಮತ್ತು ಪೆರ್ನೆಂ ರೈಲು ನಿಲ್ದಾಣಗಳ ನಡುವೆ ಇದೆ. ಅದರ ದುರಸ್ತಿ ಕಾರ್ಯವು ಪೂರ್ಣಗೊಂಡಿದ್ದು, ಹಳಿ ಸುರಕ್ಷತಾ ಪ್ರಮಾಣ ಪತ್ರವನ್ನು ಸೆ.15ರಂದು ಪಡೆದುಕೊಳ್ಳಲಾಗಿದೆ’ ಎಂದು ಕೊಂಕಣ ರೈಲ್ವೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ADVERTISEMENT

ಸುರಂಗ ದುರಸ್ತಿಯಾಗಿರುವ ಕಾರಣ ಈ ರೈಲುಗಳು ಮೊದಲಿನಂತೆ ಮಡಗಾಂ– ರೋಹಾ– ಪನ್ವೇಲ್– ಕಲ್ಯಾಣ್ ಮೂಲಕ ಸಂಚರಿಸಲಿವೆ.

ರೈಲುಗಳು:ಕಾರವಾರ, ಉಡುಪಿ, ಮಂಗಳೂರು ಮೂಲಕ ಸಾಗುವ ಎರ್ನಾಕುಳಂ ಜಂಕ್ಷನ್– ಹಜರತ್ ನಿಜಾಮುದ್ದೀನ್ ಸ್ಪೆಷಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 02617/02618), ಮೂಲಕ ಸಾಗುವ ಹಜರತ್ ನಿಜಾಮುದ್ದೀನ್– ಎರ್ನಾಕುಳಂ ಜಂಕ್ಷನ್ ಡುರಂತೊ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 02284/ 02283), ನವದೆಹಲಿ– ತಿರುವನಂತಪುರ ಸೆಂಟ್ರಲ್ (ರೈಲು ಸಂಖ್ಯೆ 02432/ 02431), ಲೋಕಮಾನ್ಯ ತಿಲಕ್ ಟರ್ಮಿನಸ್– ತಿರುವನಂತಪುರ ಸೆಂಟ್ರಲ್ (ರೈಲು ಸಂಖ್ಯೆ 06345/ 06346).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.