ಕಾರವಾರ: ಯುಗಾದಿ ಅಂಗವಾಗಿ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಭಾನುವಾರ ಸಂಭ್ರಮ ಮನೆ ಮಾಡಿತ್ತು. ಬೈಕ್ ರ್ಯಾಲಿ, ಧಾರ್ಮಿಕ ಸಭೆಗಳು ನಡೆದರೆ, ದೇವಾಲಯಗಳಲ್ಲಿ ವಿಶೇಷ ಪೂಜೆ, ಪಂಚಾಂಗ ಪಠಣ ನಡೆದವು.
ಇಲ್ಲಿನ ಸಿದ್ದಿ ವಿನಾಯಕ ದೇವಸ್ಥಾನ, ಮಹಾದೇವ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರು ಸಾಲು ಸಾಲಾಗಿ ಬಂದು ಪೂಜೆ ಸಲ್ಲಿಸಿದರು. ಬೇವು, ಬೆಲ್ಲ ಹಂಚಿ ಸಂಭ್ರಮಿಸಿದರು. ಸನಾತನ ಧರ್ಮ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ಕೋಡಿಡಬಾಗದಿಂದ ಕೋಡಿಬೀರ ದೇವಸ್ಥಾನದವರೆಗೆ ನಾಲ್ಕು ಕಿ.ಮೀ. ದೂರದವರೆಗೆ ನೂರಾರು ಬೈಕ್ಗಳಲ್ಲಿ ಸವಾರರು ಭಗವಾಧ್ವಜ ಹಿಡಿದು ಸಾಗಿದರು.
ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ನಂದನಗದ್ದಾದಲ್ಲಿ ಧರ್ಮಸಭೆ ಮತ್ತು ಗೋಪೂಜೆ ನಡೆಯಿತು. ವಿಶ್ವ ಹಿಂದೂ ಪರಿಷತ್ನ ಉತ್ತರ ಕರ್ನಾಟಕ ಪ್ರಾಂತ ಪ್ರಮುಖ ಗಂಗಾಧರ ಹೆಗಡೆ ದಿಕ್ಸೂಚಿ ಭಾಷಣ ಮಾಡಿದರು. ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ವಿನಾಯಕ ಸಾವಂತ, ಸೂರಜ್ ನಾಯ್ಕ ಬೆಳೂರಕರ ಇದ್ದರು.
ಇಲ್ಲಿನ ನರೇಂದ್ರಾಚಾರ್ಯಜಿ ಮಹಾರಾಜ ಭಕ್ತ ಸೇವಾ ಮಂಡಳಿಯಿಂದಲೂ ಅದ್ದೂರಿ ಶೊಭಾ ಯಾತ್ರೆ ನಡೆಯಿತು. ವಿವಿಧ ಪೌರಾಣಿಕ ರೂಪಕಗಳು ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.