ಕುಮಟಾ:`ಕವಿಯಾದವನು ಓದುಗನಾಗಿ ತನ್ನ ಜ್ಞಾನ ವಿಸ್ತರಿಸಿಕೊಳ್ಳುವ ಅವಕಾಶ ಕಳೆದುಕೊಳ್ಳಬಾರದು. ಹೊಸ ಜ್ಞಾನದ ಪರಿಧಿ ವಿಸ್ತರಿಸುವ ಶಕ್ತಿ ಕಾವ್ಯಕಿರುವುದರಿಂದಲೇ ಸಾಹಿತ್ಯಾಸಕ್ತರು ಬದುಕನ್ನು ನೋಡುವ ದೃಷ್ಟಿ ಭಿನ್ನವಾಗಿರುತ್ತದೆ’ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಕವಿ ಡಾ.ಟಿ.ಜಿ. ಭಟ್ಟ ಹಾಸಣಗಿ ಹೇಳಿದರು.
ತಾಲ್ಲೂಕಿನ ಹೊಲನಗದ್ದೆ ಸಮುದ್ರ ತೀರದಲ್ಲಿ ಈಚೆಗೆ ನಡೆದ ಯುಗಾದಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿ ವೆಂಕಟೇಶ ಬೈಲೂರು ಮಾತನಾಡಿ,`ಅನುಭವ ಜನ್ಯವಾದ ಕಾವ್ಯ ಹೆಚ್ಚು ಕಾಲ ಓದುಗರ ಹೃದಯದಲ್ಲಿ ಸ್ಥಾನ ಪಡೆೆಯುತ್ತದೆ' ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ‘ಜಿಲ್ಲಾ ಕಸಾಪ ಸಾಹಿತ್ಯಸಕ್ತರಲ್ಲಿ ಬರವೆಣಿಗೆಯ ಖುಷಿ ಹೆಚ್ಚಿಸಲು ಬೇರೆ ಬೇರೆ ಮಾದರಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಹಮ್ಮಿಕೊಂಡಿದೆ’ ಎಂದು ತಿಳಿಸಿದರು.
ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿನಾಯಕ ಭಂಡಾರಿ, ಕಾರ್ಯದರ್ಶಿ ಉಮೇಶ ನಾಯ್ಕ, ಕಸಾಪ ಪದಾಧಿಕಾರಿಗಳಾದ ಪ್ರದೀಪ ನಾಯಕ, ಯೋಗೇಶ ಪಟಗಾರ, ನಾಗರಾಜ ಶೆಟ್ಟಿ ಇದ್ದರು.
ಕವಿಗಳಾದ ಗಣೇಶ ಜೋಶಿ, ಬಾಲು ಪಟಗಾರ, ದಯಾನಂದ ಬಳಗು, ರಾಜು ನಾಯ್ಕ, ಸಂಧ್ಯಾ ಅಘನಾಶಿನಿ, ಸಂಧ್ಯಾರಾಣಿ ಪಟಗಾರ, ಪ್ರವೀಣ ಕರ್ಕಿಕರ್, ರಾಜು ನಾಯ್ಕ, ದಿವಾಕರ ಘನಾಶಿನಿ, ತಜುನಾ ನಾಯಕ, ಟಿ.ಬಿ. ಗೌಡ ಕವನ ವಾಚಿಸಿದರು. ಪ್ರಮೋದ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.