ADVERTISEMENT

ಉಳವಿ ಜಾತ್ರೆ: ದಟ್ಟಡವಿಯಲ್ಲಿ ಚಕ್ಕಡಿ ಸದ್ದು

ಅಲಂಕೃತ ಎತ್ತಿನಗಾಡಿಯೊಂದಿಗೆ ಒಟ್ಟಾಗಿ ಸಾಗುತ್ತಿರುವ ಭಕ್ತರು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 8:33 IST
Last Updated 1 ಫೆಬ್ರುವರಿ 2026, 8:33 IST
ಉಳವಿ ಜಾತ್ರೆಗೆ ವಿವಿಧ ಊರುಗಳಿಂದ ಸಾಗಿಬಂದ ಚಕ್ಕಡಿಗಳು ದಾಂಡೇಲಿ ಕಂಡು ಬಂದಿದ್ದು ಹೀಗೆ
ಉಳವಿ ಜಾತ್ರೆಗೆ ವಿವಿಧ ಊರುಗಳಿಂದ ಸಾಗಿಬಂದ ಚಕ್ಕಡಿಗಳು ದಾಂಡೇಲಿ ಕಂಡು ಬಂದಿದ್ದು ಹೀಗೆ   

ದಾಂಡೇಲಿ: ಕಳೆದ ನಾಲ್ಕೈದು ದಿನಗಳಿಂದ ದಾಂಡೇಲಿ–ಹಳಿಯಾಳ ರಸ್ತೆಯಲ್ಲಿ ಚಕ್ಕಡಿ ಬಂಡಿಗಳದ್ದೆ ಸದ್ದು. ಬೆಳಗಾವಿ, ಧಾರವಾಡ ಸೇರಿದಂತೆ ನಾಲ್ಕಾರು ಜಿಲ್ಲೆಗಳಿಂದ ಬರುವ ಈ ಚಕ್ಕಡಿ ಸಾಲುಗಳು ವಿಶೇಷ ಮೆರಗು ನೀಡುತ್ತಿವೆ. ಈ ಬಂಡಿ ಸಾಲು ಹೊರಟಿರುವುದು ಉಳವಿ ಚನ್ನಬಸವೇಶ್ವರ ಜಾತ್ರೆಗೆ.

‘ಕರಿ ಎತ್ತು ಕಾಳಿಂಗ ,ಬಿಳಿ ಎತ್ತು ಮಾಲಿಂಗ ಹೇ.. ಹರ ಹರ ಮಹಾದೇವ. ಉಳವಿ ಶ್ರೀ ಚನ್ನಬಸವೇಶ್ವರ ಮಹಾರಾಜ್ ಕೀ ಜೈ..ಹೇ... ನಡಿ ಬಸವ ಓಡು.. ಬೇಗಾ..’ ಈ ಉದ್ಘಾರದ ಜೊತೆಗೆ ಭಕ್ತಿಗೀತೆ, ಭಜನೆಯ ಸದ್ದು ದಟ್ಟ ಕಾಡಿನಲ್ಲಿ ಪ್ರತಿಧ್ವನಿಸಿದೆ. ಬೆಳಗಿನ ಜಾವ 4ಕ್ಕೆ ಶುರುವಾಗುವ ಜಯಘೋಷ, ಎತ್ತಿನ ಕೊರಳಿನ ಗೆಜ್ಜೆ, ಗುಮರಿ, ಚಕ್ಕಡಿ ಗಾಲಿಯ ಸದ್ದು , ಭಕ್ತಿಗೀತೆ ಅನುಸ್ವರಣ ತಡರಾತ್ರಿ ವರಿಗೆ ಈ ರಸ್ತೆಯಲ್ಲಿ ಆವರಿಸಿರುತ್ತದೆ.

ಚಕ್ಕಡಿಗೆ ಬಗೆ ಬಗೆ ಬಣ್ಣ ಬಳೆದು, ಗಾಲಿ ಕಾಡಾಣಿಗೆ ಗೆಜ್ಜೆ ಕಟ್ಟಿ, ಸುತ್ತಲೂ ನಾಲ್ಕು ಕಡೆ ಬಸವೇಶ್ವರರ ಚಿತ್ರ ಇರುವ ಕೇಸರಿ ಧ್ವಜ ಕಟ್ಟಿ, ಎತ್ತುಗಳ ಕೊಂಬುಗಳಿಗೆ ರಿಬ್ಬನ್, ಬಣ್ಣ ಬಣ್ಣದ ಲೈಟುಗಳಿಂದ ಚಿತ್ತಾರ ಮಾಡಿ, ಬಣ್ಣದಿಂದ ಶೃಂಗಾರ ಮಾಡಿ ಧ್ವನಿ ವರ್ಧಕಗಳನ್ನು ಕಟ್ಟಿಕೊಂಡು ಸಂಭ್ರಮ ಸಡಗರದಿಂದ ಉಳವಿ ಜಾತ್ರೆಗೆ ಬರುತ್ತಾರೆ.

ADVERTISEMENT

ಧಾರವಾಡ, ಹಾವೇರಿ ಬೈಲಹೊಂಗಲ, ಸವದತ್ತಿ ಸೇರಿದಂತೆ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಜಾತ್ರೆಗೆ ಬಂದು ಸೇರುತ್ತಾರೆ. ದಾಂಡೇಲಿ ನಗರವನ್ನು ದಾಟಿಕೊಂಡು ಉಳವಿಗೆ ಹೋಗುವ ಚಕ್ಕಡಿ ಗಾಡಿಯ ಭಕ್ತರು ನಗರದ ಕೋಗಿಲಬನ ಮೃತ್ಯುಂಜಯ ಮಠ ಚಕ್ಕಡಿ ತಂಗಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಬಯಲಪಾರು, ಹಳೇ ದಾಂಡೇಲಿ ಭಾಗದಲ್ಲಿ ತಂಗಿದ್ದು ವಿಶ್ರಾಂತಿಯನ್ನು ಪಡೆದು ಮತ್ತೆ ಉಳವಿಗೆ ಪ್ರಯಾಣ ಬೆಳೆಸುತ್ತಾರೆ.

‘ಊರಿನಲ್ಲಿ ಬಹುತೇಕ ಸುಗ್ಗಿ ಮುಗಿದಿದ್ದು ಉಳವಿಗೆ ಬರುವ ಇಚ್ಚೆ ಇರುವ ನಾಲ್ಕಾರು ಜನರು ಸೇರಿಕೊಂಡು ಚಕ್ಕಡಿ ಕಟ್ಟುತ್ತೇವೆ. ಎತ್ತುಗಳಿಗೆ ಬೇಕಾದ ಮೇವು, ಕಾಳು ಕಡಿ ಹಾಗೂ ಪಾದಯಾತ್ರೆಗಳಿಗೆ ದಿನಸಿಯನ್ನು ಒಂದು ವಾಹನ ಗೊತ್ತು ಮಾಡಿ ಅದರಲ್ಲಿ ಹಾಕಿಕೊಂಡು ಬರುತ್ತೇವೆ. ಎತ್ತುಗಳಿಗೆ ಆಯಾಸವಾದಾಗ ನೀರು ಇರುವ ಜಾಗ ನೋಡಿಕೊಂಡು ವಿಶ್ರಾಂತಿ ಮಾಡುತ್ತೇವೆ. ಅಲ್ಲಿಯೇ ಆಹಾರ ತಯಾರಿಸಿ ಊಟ ಮಾಡುತ್ತೇವೆ. ಇಲ್ಲವೇ ಮಠ, ದೇವಸ್ಥಾನಗಳಲ್ಲಿ ಇರುವ ಪ್ರಸಾದ ಸೇವಿಸುತ್ತೇವೆ’ ಎನ್ನುತ್ತಾರೆ ಭಕ್ತರು.

‘ನಮ್ಮೂರಿನಿಂದ ಉಳಿವಿಗೆ ಹೋಗಲು 10-12 ದಿನಗಳ ಕಾಲ ಆಗಬಹುದು. ಇದು ನಮ್ಮ 102 ನೇ ಪಾದಯಾತ್ರೆ ಸುಮಾರು ಎರಡು ತಲೆಮಾರುಗಳ ಇದರಲ್ಲಿ ಭಾಗವಹಿಸುತ್ತಿದ್ದೇವೆ. ಎತ್ತುಗಳಿಗೆ ಏನಾದರೂ ತೊಂದರೆಯಾದರೆ ಒಂದೆರಡು ದಿನ ತಡವಾಗುತ್ತದೆ. ತೇರಿನ ಮುನ್ನಾ ದಿನ ಉಳಿವಿಗೆ ತಲುಪುತ್ತೇವೆ’ ಎನ್ನುತ್ತಾರೆ ಹುಬ್ಬಳ್ಳಿ ಮಂಗಳವಾರ ಪೇಟೆ ಮುರಗೆಪ್ಪ ಯಕಲಾಸಪುರ.

ಅಡ್ಡಾದಿಡ್ಡಿ ಸಂಚಾರದಿಂದ ತೊಂದರೆ

‘ಜಾತ್ರೆಗೆ ಬರುವ ಪಾದಯಾತ್ರಿಗಳು ಅಥವಾ ಚಕ್ಕಡಿ ಯಾತ್ರಿಗಳು ನಗರದ ಪ್ರಮುಖ ಜಾಗದಲ್ಲಿ ವಿಶ್ರಾಂತಿ ಪಡೆದು ಅಲ್ಲಿಯೇ ಅಡುಗೆ ಮಾಡಿ ಆ ಜಾಗವನ್ನು ಗಲೀಜು ಮಾಡಿ ಹೋಗುತ್ತಾರೆ. ಕಾಡಿನ ಸೂಕ್ಷ್ಮತೆಯ ಅರಿವು ಇರುವುದಿಲ್ಲ. ಕೆಲವರು ಅತಿರೇಕದ ವರ್ತನೆ ತೋರುತ್ತಾರೆ. ಚಕ್ಕಡಿಗಳನ್ನು ಅಡ್ಡಾದಿಡ್ಡಿ ಸಂಚರಿಸಿ ತೊಂದರೆ ಮಾಡುತ್ತಾರೆ’ ಎಂಬುದು ಜನರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.