ಹೊನ್ನಾವರ: ಶರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ಪ್ರಭಾಕರ ಅಂಬಿಗ ಅವರ ಮೃತದೇಹ ಶನಿವಾರ ಪತ್ತೆಯಾಗಿದೆ. ಅವರ ಸಾವಿಗೆ ಕಾರಣರಾದ ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು, ಮೃತದೇಹವನ್ನಿಟ್ಟಿದ್ದ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
‘ಕಳಸಿನಮೋಟೆ ಅಂಬಿಗರಕೇರಿಯ ನಿವಾಸಿಯಾದ ನೇತ್ರಾವತಿ ಅಂಬಿಗ ಶುಕ್ರವಾರ ಕರ್ತವ್ಯದ ಅವಧಿಯಲ್ಲೇ ಸಮೀಪದ ರೈಲ್ವೆ ಸೇತುವೆ ಮೇಲಿಂದ ಶರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಕಾಸರಕೋಡ ಗ್ರಾಮ ಪಂಚಾಯ್ತಿ ಸದಸ್ಯೆ ವಿಮಲಾ ನಾಯ್ಕ ಕಾರಣ. ವಿಮಲಾ ನಾಯ್ಕ ಬಡ್ಡಿಗೆ ನೀಡಿದ್ದ ಹಣವನ್ನು ವಾಪಸ್ ಕೊಡುವಂತೆ ನೇತ್ರಾವತಿ ಅವರನ್ನು ಪೀಡಿಸಿದ್ದರಿಂದ, ಅವಮಾನಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ನೇತ್ರಾವತಿ ಪತಿ ಪ್ರಭಾಕರ ಅಂಬಿಗ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
'ಆರೋಪಿ ವಿಮಲಾ ನಾಯ್ಕ ಅವರನ್ನು ಬಂಧಿಸಿ ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು' ಎಂದು ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಮೃತದೇಹವನ್ನು ಸಾಗಿಸಲು ಕೊಡದೆ, ಪಟ್ಟು ಹಿಡಿದು ಆಗ್ರಹಿಸಿದರು. ಡಿವೈಎಸ್ಪಿ ನಿಖಿಲ್ ಪ್ರತಿಭಟನಾನಿರತರನ್ನು ಭೇಟಿ ಮಾಡಿದರು.‘ಮೂರು ದಿನಗಳೊಳಗೆ ಆರೋಪಿಯನ್ನು ಬಂಧಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ' ಎಂದು ಅಂಗನವಾಡಿ ಸಿಬ್ಬಂದಿ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.