ಶಿರಸಿ: ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಗ್ಗೆ ಅಗೌರವದಿಂದ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಹಿರಂಗ ಕ್ಷಮೆಯಾಚಿಸಬೇಕು. ಅಲ್ಲಿಯವರೆಗೆ ವಿಧಾನಸಭೆ ಕಲಾಪದಿಂದ ಅವರನ್ನು ಹೊರಗಿಡಬೇಕು ಎಂದು ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ರವಿ ಹೆಗಡೆ ಹೂವಿನಮನೆ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜವಾಬ್ದಾರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಈ ರೀತಿ ಅಗೌರವ ತೋರಿದ್ದು ಸರಿಯಲ್ಲ. ಅವರು ಆಡಿರುವ ಮಾತಿಗೆ ತಕ್ಷಣ ಕ್ಷಮೆ ಕೇಳಬೇಕು. ಏಕವಚನದ ಬಳಕೆ ಅವರ ನಾಲಿಗೆ ಮೇಲಿನ ಹಿಡಿತ ತೋರಿಸುತ್ತದೆ. ಕಾಂಗ್ರೆಸ್ಸಿಗರಿಗೆ ಸಾಂವಿಧಾನಿಕ ಹುದ್ದೆಯ ಬಗ್ಗೆ ಎಷ್ಟು ಗೌರವವಿದೆ ಎಂಬುದು ಸಿದ್ದರಾಮಯ್ಯ ಮಾತಿನಿಂದಲೇ ಅರ್ಥವಾಗುತ್ತದೆ. ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿನವರು ಈಗ ಸಂವಿಧಾನಕ್ಕೇ ಅಪಚಾರ ಮಾಡಿದ್ದಾರೆ’ ಎಂದರು.
‘ಸಿದ್ದರಾಮಯ್ಯ ಅವರ ಮಾತು ಸ್ಪೀಕರ್ ಸ್ಥಾನಕ್ಕಷ್ಟೇ ಅಲ್ಲ ಶಾಸಕ ಸ್ಥಾನಕ್ಕೂ ಮಾಡಿದ ಅಪಚಾರವಾಗಿದೆ. ಸಿದ್ದರಾಮಯ್ಯ ವಿರುದ್ಧ ಹಕ್ಕುಚ್ಯುತಿ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಪತ್ರ ಬರೆಯಲಾಗುತ್ತದೆ. ಸ್ಪೀಕರ್ ಸ್ವತಂತ್ರ ನಿರ್ಣಯ ಕೈಗೊಂಡು, ಕ್ಷಮೆ ಕೇಳುವವರೆಗೆ ಸಿದ್ದರಾಮಯ್ಯ ಅವರನ್ನು ವಿಧಾನಸಭೆಯಿಂದ ಹೊರಗಿಡಬೇಕು’ ಎಂದು ಆಗ್ರಹಿಸಿದರು. ಪಕ್ಷದ ಪ್ರಮುಖರಾದ ವಿನಾಯಕ ಹೆಗಡೆ, ಆರ್.ವಿ.ಹೆಗಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.