ಕುಮಟಾ: ‘ನಮ್ಮ ಯುವ ಪ್ರತಿಭೆಗಳು ಉದ್ಯಮದ ಜಂಜಾಟದಿಂದ ದೂರವಾಗಿ ಕೇವಲ ಹೂಡಿಕೆಯತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ದೇಶದಲ್ಲಿ ಉದ್ಯಮ ಬೆಳವಣಿಗೆಗೆ ಹಿನ್ನಡೆಯುಂಟಾಗುತ್ತಿದೆ’ ಎಂದು ಹಿರಿಯ ವಿಜ್ಞಾನಿ ಡಾ.ಅಶೋಕ ಪ್ರಭು ಹೇಳಿದರು.
ಇಲ್ಲಿಯ ಡಾ. ಎ.ವಿ.ಬಾಳಿಗಾ ಕಲಾ-ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತದ ಅರ್ಥ ವ್ಯವಸ್ಥೆ ಬೆಳವಣಿಗೆ’ ಕುರಿತು ಅವರು ಮಾತನಾಡಿದರು.
‘ದೇಶದ ಎಲ್ಲ ವಿಜ್ಞಾನ ಸಂಶೋಧನೆಗಳ ಅನುಷ್ಠಾನದ ಲಾಭ ದೇಶದ ನಮಗೆ ಸಿಗುತ್ತಿಲ್ಲ. ಸಂಶೋಧನೆ ಆಧಾರಿತ ಉದ್ಯಮ ಬೆಳವಣಿಗೆಗೆ ದೇಶದಲ್ಲಿ ಪೂರಕ ವಾತಾವರಣ ನಿರ್ಮಾಣವಾಗಬೇಕಿದೆ. ಒಂದು ಅಂದಾಜಿನ ಪ್ರಕಾರ ನೆಮ್ಮದಿಯ ಜೀವನಕ್ಕಾಗಿ ಪ್ರತೀ ವರ್ಷ ಲಕ್ಷಾಂತರ ಜನ ಪ್ರತಿಭಾವಂತರು, ಉದ್ಯಮಿಗಳು ಬೇರೆ ದೇಶಗಳ ಪೌರತ್ವ ಅರಸಿ ಹೋಗುತ್ತಿದ್ದಾರೆ. ದೇಶದ ಮಾನವ ಸಂಪನ್ಮೂಲಗಳ ಇಂಥ ವಲಹೆ ಪರಂಪರೆಯನ್ನು ತಡೆಯುವಂಥ ಉಪಕ್ರಮಗಳ ಅನುಷ್ಠಾನ ಅಗತ್ಯ’ ಎಂದರು.
ಪ್ರಾಚಾರ್ಯೆ ವೀಣಾ ಕಾಮತ್, ‘ಬಹಳ ಹಿಂದೆಯೇ ಐ.ಐ.ಟಿಯಲ್ಲಿ ಪದವಿ ಪಡೆದು ಉನ್ನತ ಹುದ್ದೆಯಿಂದ ನಿವೃತ್ತರಾಗಿರುವ ಡಾ.ಅಶೋಕ ಪ್ರಭು ಅವರು ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿ ಎನ್ನುವುದು ಹೆಮ್ಮೆಯ ಸಂಗತಿ. ಅವರ ಮಾರ್ಗದರ್ಶನ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ದಾರಿ ದೀಪದಂತಿದೆ’ ಎಂದರು.
ಉಪನ್ಯಾಸಕಾರದ ಗಿರೀಶ ಎನ್. ವನ್ನಳ್ಳಿ, ಅನುಷಾ ಬಾಡ್ಕರ್, ಮಹಾಬಲೇಶ್ವರ ಅಂಬಿಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.