ADVERTISEMENT

ಹೊನ್ನಾವರ: ಅನುದಾನ ಇದ್ದರೂ ಜಾಗವಿಲ್ಲದ ಪಶು ಆಸ್ಪತ್ರೆ!

ಹೆದ್ದಾರಿ ವಿಸ್ತರಣೆಗೆ ಕಟ್ಟಡದ ಅಲ್ಪ ಭಾಗ ತೆರವು: ಜಾಗ ಕೋರಿ ತಾ.ಪಂ.ಗೆ ಪತ್ರ

ಎಂ.ಜಿ.ಹೆಗಡೆ
Published 18 ಜುಲೈ 2025, 5:52 IST
Last Updated 18 ಜುಲೈ 2025, 5:52 IST
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಮುಂಭಾಗ ಕಳೆದುಕೊಂಡಿರುವ ಹೊನ್ನಾವರ ತಾಲ್ಲೂಕು ಪಶು ಆಸ್ಪತ್ರೆ        
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಮುಂಭಾಗ ಕಳೆದುಕೊಂಡಿರುವ ಹೊನ್ನಾವರ ತಾಲ್ಲೂಕು ಪಶು ಆಸ್ಪತ್ರೆ           

ಹೊನ್ನಾವರ: ಇಲ್ಲಿಯ ತಾಲ್ಲೂಕು ಪಶು ವೈದ್ಯ ಆಸ್ಪತ್ರೆಯದ್ದು ಒಂದು ವಿಚಿತ್ರ ಕತೆ. ತನ್ನ ಸ್ವಂತ ಜಾಗವನ್ನು ಅತಿಕ್ರಮಿಸಿ ಕಟ್ಟಡ ಕಟ್ಟಿರುವ ತಾಲ್ಲೂಕು ಪಂಚಾಯಿತಿಗೇ ‘ಪರ್ಯಾಯವಾಗಿ ಬೇರೊಂದು ಜಾಗವನ್ನಾದರೂ ಬಿಟ್ಟುಕೊಡಿ’ ಎಂದು ಬೇಡಿಕೊಳ್ಳುವ ಪರಿಸ್ಥಿತಿ!

ಹೆದ್ದಾರಿಯಂಚಿನಲ್ಲಿ ಅಕ್ಕಪಕ್ಕದಲ್ಲಿರುವ ತಾಲ್ಲೂಕು ಪಂಚಾಯಿತಿ ಹಾಗೂ ಪಶುಚಿತ್ಸಾಲಯ ಕಟ್ಟಡಗಳನ್ನು ಪರಸ್ಪರರಿಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿತ್ತು. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆಗೆ ಪಶು ಆಸ್ಪತ್ರೆ ಕಟ್ಟಡದ ಮುಂಭಾಗವನ್ನು ತೆರವುಗೊಳಿಸಲಾಗಿದೆ. ಕಿರಿದಾದ ಕಟ್ಟಡದಲ್ಲಿ ಆಸ್ಪತ್ರೆ ನಡೆಯುತ್ತಿದ್ದು, ಇದರಿಂದ ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಹಾಗೂ ಚಿಕಿತ್ಸೆಗಾಗಿ ಕರೆತರುವ ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದೆ ಎಂಬ ದೂರು ಹೆಚ್ಚಿದೆ.

‘ಆಸ್ಪತ್ರೆಯ ಹತ್ತಿರದಲ್ಲೇ ರಸ್ತೆ ಇದ್ದು ನಿಲ್ಲಲು ಜಾಗವಿಲ್ಲದಂತಾಗಿದೆ. ಜೊತೆಗೆ ವಾಹನಗಳ ಸದ್ದಿಗೆ ಚಿಕಿತ್ಸೆಗೆ ತರುವ ಸಾಕುಪ್ರಾಣಿಗಳು ಗಲಿಬಿಲಿಗೊಳ್ಳುತ್ತಿವೆ’ ಎಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ತಮ್ಮ ನಾಯಿಯನ್ನು ತಂದಿದ್ದ ಪ್ರಭಾಕರಮೂರ್ತಿ ಆತಂಕ ವ್ಯಕ್ತಪಡಿಸಿದರು.

ADVERTISEMENT

ಪಶು ಚಿಕಿತ್ಸಾಲಯದ ಜಾಗದಲ್ಲಿ ತಾಲ್ಲೂಕು ಪಂಚಾಯಿತಿಯ ಹೊಸ ಕಟ್ಟಡ ತಲೆ ಎತ್ತಿರುವುದರಿಂದ ‘ಈ ಹಿಂದೆ ತಾಲ್ಲೂಕು ಪಂಚಾಯಿತಿ ಕಚೇರಿ ಇದ್ದ ಹಳೆಕಟ್ಟಡದ ಜಾಗವನ್ನು ತನಗೆ ಬಿಟ್ಟುಕೊಡಬೇಕು’ ಎಂಬ ಪಶು ಸಂಗೋಪನೆ ಇಲಾಖೆಯ ಬೇಡಿಕೆ ಈಡೇರಿಸಲು ಮೂರು ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ನೀಡಿದ್ದ ಆದೇಶ ಇನ್ನೂ ಕಾರ್ಯಗತಗೊಂಡಿಲ್ಲ.

ನಬಾರ್ಡ್ ಸಹಯೋಗದ ಯೋಜನೆಯಡಿ ಇಲ್ಲಿನ ಪಶುವೈದ್ಯ ಆಸ್ಪತ್ರೆಗೆ ₹60 ಲಕ್ಷ ಮಂಜೂರಾಗಿದ್ದು ಕಟ್ಟಡ ಕಟ್ಟಲು ಜೂನ್ 19ರಂದು ಆಡಳಿತಾತ್ಮಕ ಅನುಮೋದನೆ ಕೂಡ ಸಿಕ್ಕಿದೆ. ಜಾಗದ ಲಭ್ಯತೆ ಇಲ್ಲದೆ ಕಾಮಗಾರಿ ಆರಂಭಕ್ಕೆ ಸಿದ್ಧತೆಯೂ ನಡೆದಿಲ್ಲ.

‘ತಾಲ್ಲೂಕು ಪಂಚಾಯಿತಿ ಹೆಸರಿನಲ್ಲಿರುವ ಜಾಗ ಇನ್ನೂ ಹಸ್ತಾಂತರವಾಗದ ಕಾರಣ ಅನುದಾನ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಜಾಗವನ್ನು ಪಶು ಸಂಗೋಪನಾ ಇಲಾಖೆಗೆ ಹಸ್ತಾಂತರಿಸುವಂತೆ ಕೆಡಿಪಿ ಸಭೆ ನಡೆದ ಮಾರನೆ ದಿನ (ಮೇ 31ಕ್ಕೆ) ತಾಲ್ಲೂಕು ಪಂಚಾಯಿತಿಗೆ ಪತ್ರ ಬರೆಯಲಾಗಿದೆ’ ಎಂದು ತಾಲ್ಲೂಕು ಆಡಳಿತ ಪಶುವೈದ್ಯಾಧಿಕಾರಿ ಡಾ.ಬಸವರಾಜ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಹಳೆ ಕಟ್ಟಡದ ಜಾಗವನ್ನು ಪಶುಸಂಗೋಪನಾ ಇಲಾಖೆಗೆ ಹಸ್ತಾಂತರಿಸಲು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹಸ್ತಾಂತರಕ್ಕೆ ಅನುಮತಿ ಕೋರಿ ಜಿಲ್ಲಾ ಪಂಚಾಯಿತಿ ಸಿಇಒಗೆ ಪತ್ರ ಬರೆಯಲಾಗುವುದು.
– ಚೇತನಕುಮಾರ, ಹೊನ್ನಾವರ ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.