ADVERTISEMENT

ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ

ಕುಮಟಾ ತಾಲ್ಲೂಕಿನ ಹಂದಿಗೋಣ ಗ್ರಾಮಸ್ಥರಿಂದ ಜಿಲ್ಲಾಡಳಿತಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 12:09 IST
Last Updated 25 ಜೂನ್ 2019, 12:09 IST
ಕುಮಟಾ ತಾಲ್ಲೂಕಿನ ಹಂದಿಗೋಣ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ಸ್ಥಾಪಿಸಲು ಉದ್ದೇಶಿಸಿರುವ ಜಾಗ
ಕುಮಟಾ ತಾಲ್ಲೂಕಿನ ಹಂದಿಗೋಣ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ಸ್ಥಾಪಿಸಲು ಉದ್ದೇಶಿಸಿರುವ ಜಾಗ   

ಕಾರವಾರ:ಊರಿನ ಮಧ್ಯಭಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಬಾರದು ಎಂದು ಕುಮಟಾ ತಾಲ್ಲೂಕಿನ ಹಂದಿಗೋಣ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಹಂದಿಗೋಣದ ಮಹಾಗಣಪತಿ ದೇವಸ್ಥಾನದ ಸಮೀಪದಲ್ಲಿರುವ ಸರ್ವೆ ನಂಬರ್ 260ರಲ್ಲಿ ಕಲಭಾಗ ಗ್ರಾಮ ಪಂಚಾಯ್ತಿಯವರು ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸಿದ್ಧತೆ ನಡೆಸಿದ್ದಾರೆ. ಈ ಸ್ಥಳದಿಂದ 30–40 ಮೀಟರ್‌ಗಳ ಅಂತರದಲ್ಲೇ ಹಲವಾರು ಮನೆಗಳಿವೆ. ಅಲ್ಲದೇ ಹಂದಿಗೋಣದ ಏಕೈಕ ಹಿಂದೂ ರುದ್ರಭೂಮಿಯೂ ಇಲ್ಲೇ ಇದೆ. ಜಿಲ್ಲಾ ಪಂಚಾಯ್ತಿ ಅನುದಾನ ಬಳಸಿ ನಿರ್ಮಿಸಲಾದ ಮಳೆ ನೀರಿನ ಇಂಗು ಗುಂಡಿಯೂ ಇಲ್ಲಿದೆ. ಕೂಗಳತೆಯ ದೂರದಲ್ಲಿ ನಾಲ್ಕು ದೇವಸ್ಥಾನಗಳೂ ಇವೆ.

ADVERTISEMENT

ಇಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಡಿ.12ರಂದೇ ಮನವಿ ಸಲ್ಲಿಸಲಾಗಿತ್ತು. ಗ್ರಾಮಸ್ಥರ ವಿರೋಧವಿದ್ದರೂ ಯಾವುದೇ ಯಾವುದೇ ಅಹವಾಲು ಸ್ವೀಕರಿಸದೇ ಅದೇ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಯತ್ನಿಸಲಾಗುತ್ತಿದೆ.ಈ ಸಂಬಂಧ ಈಗಾಗಲೇ ಸರ್ವೆ ಕಾರ್ಯವನ್ನೂ ಮಾಡಲಾಗಿದೆ. ಈ ಕಾಮಗಾರಿಯಿಂದ ಜನರ ಆರೋಗ್ಯದ ಮೇಲೆ ಪರಿಣಾಮವಾಗಲಿದೆ. ಆದ್ದರಿಂದ ಇಲ್ಲಿನ ಬದಲು ಸಮೀಪದಲ್ಲಿರುವ ಅರಣ್ಯ ಪ್ರದೇಶದ ಖಾಲಿ ಜಾಗದಲ್ಲಿಘಟಕ ಸ್ಥಾಪನೆ ಮಾಡಲಿ ಎಂದುಮತ್ತೊಮ್ಮೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜಿ.ಪಿ.ಭಾಗ್ವತ್ ಮತ್ತು ಗ್ರಾಮಸ್ಥರು ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.