ಮುಂಡಗೋಡ: ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದ ಮತದಾರರಿಂದಲೇ ಮತದಾನ ಜಾಗೃತಿ ಕಾರ್ಯಕ್ರಮ ಮಾಡಿಸಿದ ಇಲ್ಲಿನ ತಹಶೀಲ್ದಾರ್ ಶ್ರೀಧರ ಮುಂದಲಮನಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇಲ್ಲಿನ ಸುಭಾಷ್ ನಗರದ ಅಲೆಮಾರಿ ಜನಾಂಗದ ಕೆಲವರು, ತಮಗೆ ಇನ್ನೂ ತನಕ ಮನೆ ನೀಡಿಲ್ಲ. ಇದರಿಂದ ಈ ಸಲದ ಉಪಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಹಶೀಲ್ದಾರರ ಬಳಿ ಹೇಳಿದ್ದರು. ಮತದಾನ ಬಹಿಷ್ಕಾರ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಅಧಿಕಾರಿಗಳು ಅವರ ಮನವೊಲಿಸಿದ್ದಾರೆ.
‘ಮತದಾನ ಪವಿತ್ರ ಹಕ್ಕು, ಎಲ್ಲರೂ ಚಲಾಯಿಸಿ’ ಎಂದು ಹೇಳುತ್ತ ವಾರದ ಸಂತೆ ಸೇರಿದಂತೆ ಕೆಲವೆಡೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ಇದೇ ಅಲೆಮಾರಿ ಜನಾಂಗದವರು ಸೋಮವಾರ ನಡೆಸಿಕೊಟ್ಟಿದ್ದಾರೆ.
‘ನಿವೇಶನದ ಬೇಡಿಕೆಗಾಗಿ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದರು. ನಿವೇಶನರಹಿತರ ಯಾದಿಯಲ್ಲಿ ಅವರ ಹೆಸರು ಇರುವುದರಿಂದ ಅವರಿಗೆ ನಿವೇಶನ ಸಿಗುವ ಸಾಧ್ಯತೆಯಿದೆ. ಇದನ್ನು ಅಲೆಮಾರಿ ಜನಾಂಗದವರಿಗೆ ಮನವರಿಕೆ ಮಾಡಿಕೊಟ್ಟ ಮೇಲೆ, ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನೂ ಅವರೇ ನಡೆಸಿಕೊಟ್ಟಿದ್ದಾರೆ’ ಎಂದು ಮುಂದಲಮನಿ ‘ಪ್ರಜಾವಾಣಿ’ಗೆ ತಿಳಿಸಿದರು. ಅಲೆಮಾರಿ ಜನಾಂಗದವರ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಪ್ರೊಬೆಷನದಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ ಸಹ ಮೆಚ್ಚುಗೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.