ಕುಮಟಾ: ಅಘನಾಶಿನಿ ನದಿ ದಡದಲ್ಲಿರುವ ಹೆಗಡೆ, ದೀವಗಿ ಹಾಗೂ ಹೊಲನಗದ್ದೆ ಗ್ರಾಮ ಪಂಚಾಯಿತಿಗಳ ಸುಮಾರು 820 ಕುಟುಂಬಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಕಾಯಕ ಈ ವರ್ಷವೂ ಮುಂದುವರಿದಿದೆ.
ಹೆಗಡೆ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 380, ದೀವಗಿ ಗ್ರಾಮ ಪಂಚಾಯಿತಿಯಲ್ಲಿ 60 ಮತ್ತು ಹೊಲನಗದ್ದೆ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 380 ಕುಟುಂಬಗಳಿಗೆ ನಿತ್ಯ ಟ್ಯಾಂಕರ್ ಮೂಲಕ ಸ್ಥಳೀಯ ಗ್ರಾಮ ಪಂಚಾಯಿತಿ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ.
ಅಘನಾಶಿನಿ ನದಿ ತಟದ ಹೆಗಡೆ, ದೀವಗಿ ಹಾಗೂ ಒಂದು ಬದಿ ನದಿಯ ಹಿನ್ನೀರು ಮತ್ತು ಇನ್ನೊಂದು ಬದಿ ಅರಬ್ಬಿ ಸಮುದ್ರ ಆವರಿಸಿರುವ ಹೊಲನಗದ್ದೆ ಗ್ರಾಮ ಪಂಚಾಯಿತಿಯಲ್ಲಿ ಬೇಸಿಗೆಯಲ್ಲಿ ಕುಡಿಯಲು ಬಳಕೆ ಮಾಡುವ ತೆರೆದ ಬಾವಿಗಳ ನೀರು ಸವಳಾಗುತ್ತಿದೆ ಎಂಬುದು ಜನರ ದೂರು.
‘ಗ್ರಾಮ ಪಂಚಾಯಿತಿಗೆ ನೀರು ಪೂರೈಕೆ ಮಾಡುವ ಮೂರು ಕೊಳವೆಬಾವಿಗಳಲ್ಲಿ ನೀರಿನ ಕೊರತೆ ಕಂಡುಬಂದಿದೆ. ಒಂದು ತೆರೆದ ಬಾವಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿ ಸಿಮೆಂಟ್ ರಿಂಗ್ ಅಳವಡಿಸುವ ಕಾರ್ಯ ನಡೆದಿದೆ. ಸದ್ಯ ಸಮೀಪದ ಮಚಗೋಣ ಹಾಗೂ ಅಳ್ವೆಕೋಡಿಯಿಂದ ಕುಡಿಯುವ ನೀರು ತರಿಸಿಕೊಳ್ಳಲಾಗುತ್ತಿದೆ. ಪಂಚಾಯಿತಿಯ ಹೆಚ್ಚಿನ ಅನುದಾನ ಕುಡಿಯುವ ನೀರಿಗೆ ಬಳಕೆಯಾಗುತ್ತಿದ್ದು, ನಿತ್ಯ ಪ್ರತಿ ವ್ಯಕ್ತಿಗೆ 55 ಲೀಟರ್, ದನಕರುಗಳಿಗೆ ಪ್ರತ್ಯೇಕ 100 ಲೀಟರ್ ನೀರು ಪೂರೈಸಲಾಗುತ್ತಿದೆ’ ಎಂದು ಹೆಗಡೆ ಗ್ರಾಮ ಪಂಚಾಯಿತಿ ಪಿ.ಡಿ.ಒ ವೆಂಕಟ್ರಮಣ ಪಟಗಾರ ಹೇಳಿದರು.
‘ಪ್ರತಿ ಬಾರಿಯಂತೆ ಬೇಸಿಗೆ ಆರಂಭದಲ್ಲೇ ಗ್ರಾಮದ ಜಲಮೂಲಗಳು ಉಪ್ಪುನೀರು ನುಗ್ಗಿ ಸವುಳಾಗಿದೆ. ನೀರಿನ ಕೊರತೆ ಉಂಟಾಗುತ್ತಿದ್ದಂತೆಯೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಆರಂಭವಾಗಿದೆ’ ಎಂದು ತಾಲ್ಲೂಕಿನ ಹೊಲನಗದ್ದೆ ಗ್ರಾಮ ಪಂಚಾಯಿತಿಯ ಜನತಾ ಪ್ಲಾಟ್ನ ನಿವಾಸಿ ಶಾಂತಿ ಬೈಲೂರು ಹೇಳಿದರು.
ಮುಂದಿನ ವರ್ಷದೊಳಗೆ ಅಘನಾಶಿನಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಆರಂಭವಾಗಲು ಎಲ್ಲ ರೀತಿಯ ಪ್ರಯತ್ನ ಸಾಗುತ್ತಿದೆ.ದಿನಕರ ಶೆಟ್ಟಿ, ಶಾಸಕ
‘ಬರ್ಗಿ, ಹಿರೇಗುತ್ತಿ, ಮಾದನಗೇರಿ, ಗೋಕರ್ಣ ಭಾಗದಲ್ಲೂ ಕುಡಿಯುವ ನೀರು ಸಮಸ್ಯೆ ದೊಡ್ಡ ಪ್ರಮಾಣದಲ್ಲಿತ್ತು. ಗೋಕರ್ಣ ಕುಡಿಯುವ ನೀರು ಯೋಜನೆ ಜಾರಿಗೆ ಬಂದ ಮೇಲೆ ಸಮಸ್ಯೆ ನಿವಾರಣೆಯಾಗಿದೆ. 14 ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಸುವ ₹169 ಕೋಟಿ ವೆಚ್ಚದ ಅಘನಾಶಿನಿ ಬಹುಗ್ರಾಮ ಯೋಜನೆ ಜಾರಿಗೆ ಬಂದರೆ ತಾಲ್ಲೂಕಿನ ಬಹುತೇಕ ಗ್ರಾಮಗಳು ಕುಡಿಯುವ ನೀರು ಸಮಸ್ಯೆಯಿಂದ ಮುಕ್ತವಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಇ.ಒ ಆರ್.ಎಲ್. ಭಟ್ಟ ಪ್ರತಿಕ್ರಿಯಿಸಿದರು.
‘ಮರಾಕಲ್ ಯೋಜನೆಯ ಅಘನಾಶಿನಿ ಹರಿವು ಪ್ರಮಾಣ ಚೆನ್ನಾಗಿರುವುದರಿಂದ ಕುಮಟಾ ಪಟ್ಟಣಕ್ಕೆ ಸದ್ಯ ಕುಡಿಯುವ ನೀರು ಸಮಸ್ಯೆ ಉಂಟಾಗಿಲ್ಲ’ ಎಂದು ಪುರಸಭೆ ಮುಖ್ಯಧಿಕಾರಿ ವಿದ್ಯಾಧರ ಕಲಾದಗಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.