ಕಾರವಾರ:‘ಗರೀಬ್ ಕಲ್ಯಾಣ’ ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರದ ನೀಡುತ್ತಿರುವ ₹ 500 ಅನ್ನು ಕೂಡಲೇ ಪಡೆದುಕೊಳ್ಳದಿದ್ದರೆ ವಾಪಸಾಗುತ್ತದೆ ಎಂಬ ಸುಳ್ಳು ಸಂದೇಶವೊಂದು, ಜಿಲ್ಲೆಯ ಫಲಾನುಭವಿಗಳನ್ನು ಶುಕ್ರವಾರ ಗೊಂದಲಕ್ಕೆ ದೂಡಿತ್ತು. ಹಣ ಪಡೆದುಕೊಳ್ಳಲು ನೂರಾರು ಮಹಿಳೆಯರುಬ್ಯಾಂಕ್ನತ್ತ ದೌಡಾಯಿಸಿದ್ದರು.
ವಾಟ್ಸ್ಆ್ಯಪ್ನಲ್ಲಿ ಬಂದ ಸಂದೇಶದಲ್ಲಿ ಈ ತಿಂಗಳು ಹಣ ಪಡೆದುಕೊಳ್ಳದಿದ್ದರೆ ಮುಂದಿನ ತಿಂಗಳೂ ಸಿಗುವುದಿಲ್ಲ ಎಂದೂ ಬರೆಯಲಾಗಿತ್ತು. ಇದನ್ನು ನಂಬಿದಗ್ರಾಮೀಣ ಭಾಗದ ನೂರಾರು ಮಹಿಳೆಯರು ತಮ್ಮ ಬ್ಯಾಂಕ್ ಶಾಖೆಗಳ ಮುಂದೆ ಜಮಾಯಿಸಿದ್ದರು.ಅಂಕೋಲಾ ತಾಲ್ಲೂಕಿನ ಅವರ್ಸಾ, ದಾಂಡೇಲಿ, ಕಾತೂರ ಮುಂತಾದೆಡೆ ಫಲಾನುಭವಿಗಳು ಬೆಳಿಗ್ಗೆಯೇ ಸೇರಿದ್ದರು.
ಈ ಬಗ್ಗೆ ಸ್ಪಷ್ಟಪಡಿಸಿದಜಿಲ್ಲಾಲೀಡ್ ಬ್ಯಾಂಕ್ ವ್ಯವಸ್ಥಾಪಕಪಿ.ಎಂ.ಪಿಂಜರ್, ‘ಇದೊಂದು ಸುಳ್ಳು ಸುದ್ದಿ. ಲಾಕ್ಡೌನ್ ಅವಧಿ ಮುಗಿದ ಬಳಿಕವೂ ಹಣವನ್ನು ಪಡೆದುಕೊಳ್ಳಲು ಅವಕಾಶವಿದೆ.ಹಣಕಾಸಿನ ತೀರಾ ಅಗತ್ಯ ಇರುವವರಿಗೆ ಮಾತ್ರ ಹಣ ನೀಡುವಂತೆ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ. ಲಾಕ್ಡೌನ್ ಇರುವಾಗ ಜನರು ಗುಂಪುಗೂಡುವುದು ಸರಿಯಲ್ಲ’ ಎಂದು ಹೇಳಿದರು.
‘ಬ್ಯಾಂಕ್ ಖಾತೆಗಳಿಗೆ ಜಮೆಯಾದ ಹಣ ಯಾವುದೇ ಕಾರಣಕ್ಕೂ ವಾಪಸ್ ಹೋಗುವುದಿಲ್ಲ. ಗ್ರಾಹಕರ ಯಾವುದೇ ಸಾಲದ ಖಾತೆಗೂ ಆ ಹಣವನ್ನು ಜಮೆ ಮಾಡಿಕೊಳ್ಳುವುದಿಲ್ಲ. ಲಾಕ್ಡೌನ್ ಘೋಷಣೆಯಾದ ಬಳಿಕ ಎಲ್ಲ ಬ್ಯಾಂಕ್ಗಳೂ ಸ್ವಯಂ ಚಾಲಿತ ಸಾಲ ಮರಪೂರಣ ವ್ಯವಸ್ಥೆ ಹಾಗೂ ಕನಿಷ್ಠ ಠೇವಣಿ ಶುಲ್ಕ ನಿಯಮಗಳನ್ನು ರದ್ದು ಮಾಡಿವೆ. ಕೆ.ವೈ.ಸಿ ಮಾಹಿತಿ ಬಾಕಿಯಿದ್ದರೂ ಈಗ ₹ 500 ಕೊಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ. ವಾಟ್ಸ್ಆ್ಯಪ್ನಲ್ಲಿ ಬಂದ ಸುಳ್ಳು ಸುದ್ದಿಯನ್ನು ನಂಬಬಾರದು. ತೀರಾ ಹಣಕಾಸಿನ ತೊಂದರೆಯಿದ್ದಾಗ ಈ ಹಣವನ್ನು ಬಳಸಿಕೊಳ್ಳುವುದು ಸೂಕ್ತ’ ಎಂದು ಸಲಹೆ ನೀಡಿದರು.
ಅಂಕಿ ಅಂಶ
2,37,411:ನಮ್ಮ ಜಿಲ್ಲೆಯಲ್ಲಿ ಫಲಾನುಭವಿಗಳು
₹ 11.87 ಕೋಟಿ:ಮಂಜೂರಾದ ಒಟ್ಟು ಮೊತ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.