ಕಾರವಾರ: ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 121 ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳು, ಬುಧವಾರ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಿರ್ಗಮನ ಪಥ ಸಂಚಲನ ನೆರವೇರಿಸಿದರು.
ಇದು 14ನೇ ತಂಡವಾಗಿದ್ದು, ಕಳೆದ ವರ್ಷ ಮಾರ್ಚ್ನಿಂದ ತರಬೇತಿ ಪಡೆಯುತ್ತಿದ್ದರು. ಇವರಲ್ಲಿ 26 ಮಂದಿ ಸ್ನಾತಕೋತ್ತರ ಪದವಿ, 13 ಮಂದಿ ಎಂಜಿನಿಯರಿಂಗ್ ಪದವಿ ಮತ್ತು 71 ಮಂದಿ ಪದವೀಧರರಾಗಿದ್ದಾರೆ. ಮೂವರು ವೃತ್ತಿಪರ ಶಿಕ್ಷಣ ಹಾಗೂ ಆರು ಜನ ಪಿ.ಯು.ಸಿ ಶಿಕ್ಷಣ ಪೂರೈಸಿದ್ದಾರೆ.
ಪ್ರಶಿಕ್ಷಣಾರ್ಥಿಗಳ ಆಕರ್ಷಕ ಪಥಸಂಚಲನದ ನಂತರ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರೂ ಆಗಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ ಅವರು ಕವಾಯತು ತಂಡಗಳ ಪರೀವಿಕ್ಷಣೆ ನಡೆಸಿ ಶುಭ ಹಾರೈಸಿದರು.
ಒಳಾಂಗಣ, ಹೊರಾಂಗಣ ಹಾಗೂ ಬಂದೂಕು ಗುರಿ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇವುಗಳಲ್ಲಿ ಉತ್ತಮ ಅಂಕ ಗಳಿಸಿದ 12 ಪ್ರಶಿಕ್ಷಣಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಮೈಸೂರಿನವರಾದ, ಬೆಂಗಳೂರು ನಗರ ಘಟಕದ ಅಂಬಿಕಾ ಬಾಯಿ.ಕೆ ‘ಸರ್ವೋತ್ತಮ ಪ್ರಶಸ್ತಿ’ಯನ್ನು ಪಡೆದುಕೊಂಡರು.
ಡಿ.ಎ.ಆರ್. ಡಿ.ವೈ.ಎಸ್.ಪಿ ದಿಲೀಪ್.ಎಸ್.ವಿ ಸ್ವಾಗತಿಸಿದರು. ಡಿ.ಸಿ.ಆರ್.ಬಿ ಡಿ.ವೈ.ಎಸ್.ಪಿ ಅರವಿಂದ ಕಲಗುಜ್ಜಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.