ಶಿರಸಿ: ಮನುಷ್ಯ ಆರೋಗ್ಯವಂತನಾಗಿರಲು ಪ್ರತಿದಿನ ಹಾಗೂ ಕಾಲಮಾನಕ್ಕನುಸಾರವಾಗಿ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ನಿಸರ್ಗ ಆಸ್ಪತ್ರೆಯ ವೈದ್ಯ ಡಾ.ವಿನಾಯಕ ಹೆಬ್ಬಾರ್ ಹೇಳಿದರು.
ಆಯುಷ್ ಇಲಾಖೆ, ನಿಸರ್ಗ ಟ್ರಸ್ಟ್ ಜಂಟಿಯಾಗಿ ಆಯುರ್ವೇದ ಆಸ್ಪತ್ರೆ, ಆದರ್ಶ ವನಿತಾ ಸಮಾಜದ ಸಹಯೋಗದಲ್ಲಿ ಗುರುವಾರ ಇಲ್ಲಿ ಆಯೋಜಿಸಿದ್ದ ಮನೆಮದ್ದು ಮಾಹಿತಿ, ಔಷಧ ಸಸ್ಯಗಳು, ಅಡುಗೆ ಮನೆಮದ್ದು ಪ್ರದರ್ಶನದಲ್ಲಿ ಅವರು ಮಾತನಾಡಿದರು.
ತಜ್ಞ ವೈದ್ಯೆ ಡಾ.ತೇಜಸ್ವಿನಿ ಜಿ.ಎನ್ ಅವರು ಮಕ್ಕಳಿಗೆ ಕಾಡುವ ಕೆಮ್ಮು, ಕಫ, ಜಂತುಹುಳುವಿನ ತೊಂದರೆ ನಿವಾರಣೆಯ ಕ್ರಮಗಳನ್ನು, ಡಾ.ಮಧುಮತಿ ಹೆಗಡೆ ಅವರು ರಕ್ತಹೀನತೆಗೆ ಕಾರಣ, ಪರಿಹಾರ ಮಾರ್ಗಗಳ ಕುರಿತು ತಿಳಿಸಿದರು. ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ ಅವರು, ಸಂಧಿವಾತ, ಆಮವಾತ, ವಾತರಕ್ತ, ಮೇದಸಾವೃತ ವಾತಗಳಿಗೆ ಮನೆಮದ್ದು ಸಿದ್ಧತೆ ಬಗ್ಗೆ ತಿಳಿಸಿದರು.
ಶಶಿಕಲಾ ಭಟ್ಟ, ವಿಮಲಾ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು. ದೇವಕಿ ಹೆಗಡೆ ಪ್ರಾರ್ಥಿಸಿದರು. ಸೀತಾ ಕೂರ್ಸೆ ಸ್ವಾಗತಿಸಿದರು. ವಿಜಯಲಕ್ಷ್ಮಿ ನಾಡಿಗೇರ ನಿರೂಪಿಸಿದರು. ಶಾಂತಲಾ ಹೆಗಡೆ ವಂದಿಸಿದರು. ವಾಸಂತಿ ಹೆಗಡೆ, ಔಷಧ ವಿತರಕ ಜಿ.ಬಿ.ಕೃಷ್ಣಮೂರ್ತಿ, ವೀರಣ್ಣ ನಡುವಿನಮನಿ, ಅಶ್ವಿನಿ ಹುಲಸ್ವಾರ್, ಡಾ.ಅಭಿಲಾಷ್ ಕೆ.ಎನ್ ಡಾ.ಪ್ರಜ್ಞಾ ಭಟ್ ಸಹಕರಿಸಿದರು. ಮನೆಮದ್ದು ಮಾಹಿತಿ ಕೈಪಿಡಿ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.