ಹೊನ್ನಾವರ: ಸಾಂಪ್ರದಾಯಿಕ ಯಕ್ಷಗಾನ ಕಲೆಯ ಕುರಿತಾದ ಜ್ಞಾನವನ್ನು ಹಿರಿಯರು ಹೊಸ ತಲೆಮಾರಿನ ಜನರಿಗೆ ಹಸ್ತಾಂತರಿಸಬೇಕಿದ್ದು ಈ ನಿಟ್ಟಿನಲ್ಲಿ ಕೆರೆಮನೆ ಮೇಳ ಮಹತ್ವದ ಪಾತ್ರ ನಿರ್ವಹಿಸಿದೆ ಎಂದು ಸೇಂಟ್ ಮಿಲಾಗ್ರಿಸ್ ಸಹಕಾರಿ ಸಂಘದ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಹೇಳಿದರು.
ತಾಲ್ಲೂಕಿನ ಗುಣವಂತೆಯ ಶ್ರೀಮಯ ಯಕ್ಷಗಾನ ಕಲಾಕೇಂದ್ರದಲ್ಲಿ ಭಾನುವಾರ ನಡೆದ 21 ದಿನಗಳ ಅಖಿಲ ಭಾರತ ಯಕ್ಷಗಾನ ಪರಿಚಯಾತ್ಮಕ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಪ್ರಾಧ್ಯಾಪಕ ನಾಗರಾಜ ಹೆಗಡೆ ಅಪಗಾಲ ಮಾತನಾಡಿ, ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಜನರ ನಡುವೆ ಸಾಂಸ್ಕೃತಿಕ ವಿನಿಮಯ ಅತ್ಯಂತ ಅಗತ್ಯದ ಸಂಗತಿಯಾಗಿದ್ದು ಯಕ್ಷಗಾನ ಹಾಗೂ ಇತರ ಕಲಾಪ್ರಕಾರಗಳ ಪರಸ್ಪರ ಮುಖಾಮುಖಿಯಿಂದ ಕಲೆ ಇನ್ನಷ್ಟು ಶ್ರೀಮಂತವಾಗುತ್ತದೆ' ಎಂದು ಹೇಳಿದರು.
ಬಾಲಚಂದ್ರ ಗೌಡ ಮುಗಳಿ ಮಾತನಾಡಿದರು. ದೇಶದ ವಿವಿಧೆಡೆಗಳಿಂದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಿ ರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಸ್ವಾಗತಿಸಿದರು. ಮಹೇಶ ಹೆಗಡೆ ಮಾಳ್ಕೋಡ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ನಡೆದ ವಿವಿಧ ಪ್ರಕಾರದ ನೃತ್ಯ, ಯಕ್ಷಗಾನದ ಪೂರ್ವರಂಗ ಹಾಗೂ ಒಡ್ಡೋಲಗ ಪ್ರದರ್ಶನಗಳು ಪ್ರೇಕ್ಷಕರಿಗೆ ಮುದ ನೀಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.