ADVERTISEMENT

ಯಕ್ಷಗಾನ ಭಾಗವತ ಕೃಷ್ಣ ಭಂಡಾರಿ ನಿಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 11:50 IST
Last Updated 5 ಸೆಪ್ಟೆಂಬರ್ 2021, 11:50 IST
ಕೃಷ್ಣ ಭಂಡಾರಿ
ಕೃಷ್ಣ ಭಂಡಾರಿ   

ಹೊನ್ನಾವರ (ಉತ್ತರ ಕನ್ನಡ): ಪ್ರಸಿದ್ಧ ಯಕ್ಷಗಾನ ಭಾಗವತ, ತಾಲ್ಲೂಕಿನ ಗುಣವಂತೆಯ ಕೃಷ್ಣ ಭಂಡಾರಿ (61) ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಂಭು ಹೆಗಡೆ ಮೊದಲಾದ ಮೇರು ಕಲಾವಿದರೊಂದಿಗೂ ಅವರು ರಂಗದಲ್ಲಿ ತಾಳದ ಸೂತ್ರ ಹಿಡಿದಿದ್ದರು. ಅವರ ವೃತ್ತಿ ಮೇಳ ಹಾಗೂ ಬಯಲಾಟ ಎರಡೂ ಕಡೆಗಳಲ್ಲಿ ಬೇಡಿಕೆಯ ಭಾಗವತರಾಗಿದ್ದರು.

ADVERTISEMENT

ಹಾಡುಗಾರಿಕೆಯೊಂದಿಗೆ ಮದ್ದಲೆ ಹಾಗೂ ಚೆಂಡೆವಾದನಗಳನ್ನೂ ಬಲ್ಲವರಾಗಿದ್ದರು. ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ ಮುಮ್ಮೇಳದ ಕಲಾವಿದರಾಗಿಯೂ ಅನುಭವ ಹೊಂದಿದ್ದರು. ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿದ್ದ ಅವರು, ಕೆರೆಮನೆ ಮಹಾಬಲ ಹೆಗಡೆ ಅವರಿಂದ ಯಕ್ಷಗಾನದ ಹಲವು ಮಟ್ಟುಗಳನ್ನು ಕಲಿತಿದ್ದರು.

ಕೆರೆಮನೆ ಮೇಳದ ಭಾಗವತರಾಗಿ ಫ್ರಾನ್ಸ್, ಸ್ಪೇನ್ ಮೊದಲಾದ ಐರೋಪ್ಯ ರಾಷ್ಟ್ರಗಳ ತಿರುಗಾಟ ಕೈಗೊಂಡಿದ್ದರು. ಅವರ ಕಲಾಸೇವೆಯಿಂದ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪುರಸ್ಕಾರಗಳಿಗೂ ಭಾಜನರಾಗಿದ್ದರು.

ಅಂತ್ಯಕ್ರಿಯೆಯು ಗುಣವಂತೆಯಲ್ಲಿ ಭಾನುವಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.