ಹೊನ್ನಾವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಕವಲಕ್ಕಿಯ ಮಹಾಸತಿ ಸಭಾಭವನದಲ್ಲಿ ಯಕ್ಷಗಾನ ಗೋಷ್ಠಿ, ವಿಚಾರ ಸಂಕಿರಣ, ಯಕ್ಷಗಾನ ಪ್ರದರ್ಶನವನ್ನು ಮೇ 25 ಹಾಗೂ 26ರಂದು ಹಮ್ಮಿಕೊಳ್ಳಲಾಗಿದೆ.
ಯಕ್ಷಗಾನ ಹಬ್ಬದ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯಕ್ಷಗಾನ ಅಕಾಡೆಮಿ ಸದಸ್ಯ ವಿದ್ಯಾಧರ ಜಳವಳ್ಳಿ, ‘25ರಂದು ಬೆಳಿಗ್ಗೆ 10ಕ್ಕೆ ಯಕ್ಷಗಾನ ಕಲಾವಿದ ಕೃಷ್ಣ ಯಾಜಿ ಬಳಕೂರು ಉದ್ಘಾಟನೆ ನೆರವೇರಿಸಲಿದ್ದಾರೆ’ ಎಂದರು.
‘ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಾಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಚಾರ ಸಂಕಿರಣ, ಗೋಷ್ಠಿ ನಡೆಯಲಿದ್ದು, ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಶಂಕರ ಹೆಗಡೆ ನಿಲ್ಕೋಡ, ಅಶ್ವಿನಿ ಕೊಂಡದಕುಳಿ, ಎಂ.ಆರ್. ನಾಯಕ, ಪ್ರಸಾದ ಭಟ್ಕಳ, ನಿರ್ಮಲಾ ಹೆಗಡೆ ಭಾಗವಹಿಸುವರು. ಕಲಾಧರ ಯಕ್ಷಗಾನ ಕಲಾ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಮಹಿಳಾ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿವೆ’ ಎಂದು ತಿಳಿಸಿದರು.
‘26ರಂದು ಬೆಳಿಗ್ಗೆ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಲಿದ್ದು, ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ಗಣೇಶ ಗಾಂವಕರ ಹಾಗೂ ನಾಗಶ್ರೀ ಭಾಗವಹಿಸುವರು. ಸುಬ್ರಹ್ಮಣ್ಯ ಚಿಟ್ಟಾಣಿ, ಕೆರೆಮನೆ ಶಿವಾನಂದ ಹೆಗಡೆ, ಪವನ ಕಿರಣಕೆರೆ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವರು. ಕರ್ಣಪರ್ವ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯುವುದು. ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ಪತ್ರಕರ್ತ ಜಿ.ಯು. ಭಟ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಗೌಡ ಪಾಲ್ಗೊಳ್ಳುವರು. ನಂತರ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಲಿದೆ’ ಎಂದು ಅವರು ಹೇಳಿದರು.
ಯಕ್ಷಗಾನ ಕಲಾವಿದರಾದ ಗಣೇಶ ನಾಯ್ಕ ಮುಗ್ವ, ಶಂಕರ ಹೆಗಡೆ ನಿಲ್ಕೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.