
ಯಲ್ಲಾಪುರ: ‘ಫೆಬ್ರುವರಿಯಲ್ಲಿ ನಡೆಯಲಿರುವ ಗ್ರಾಮದೇವಿ ಜಾತ್ರೆಗೆ ಬರುವ ಭಕ್ತರಿಗೆ, ಪಟ್ಟಣದ ನಿವಾಸಿಗಳಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಶಿವರಾಮ ಹೆಬ್ಬಾರ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ಗ್ರಾಮದೇವಿ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,
‘ಸಂಚಾರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ನಿಸರ್ಗಮನೆ– ತಟಗಾರ ರಸ್ತೆ ಕಡೆ ವಾಹನ ಸಂಚರಿಸಲು ಅನುವು ಮಾಡಿಕೊಡಬೇಕು. ಕಾರು, ಜೀಪು ಇತ್ಯಾದಿ ಸಣ್ಣ ಪುಟ್ಟ ವಾಹನದಲ್ಲಿ ಸಂಚರಿಸುವವರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು’ ಎಂದರು.
‘ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಆರಂಭಗೊಂಡಿದೆ. ಕುಡಿಯುವ ನೀರಿನ ತೊಂದರೆ ಆಗದಂತೆ ಹೆಚ್ಚುವರಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಬೀದಿದೀಪಗಳನ್ನು ಪರಿಶೀಲಿಸಿ ಸರಿಯಿಲ್ಲದ ದೀಪಗಳನ್ನು ಬದಲಿಸಲಾಗುತ್ತಿದೆ. ಅಗತ್ಯ ಇದ್ದಲ್ಲಿ ಹೆಚ್ಚುವರಿ ದೀಪ ಅಳವಡಿಸಲಾಗುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುಮಾರ ನಾಯ್ಕ ಮಾಹಿತಿ ನೀಡಿದರು.
‘ಹಂದಿ ಹಾಗೂ ನಾಯಿಗಳ ಕಾಟ ಪಟ್ಟಣದಲ್ಲಿ ಜಾಸ್ತಿಯಾಗಿದ್ದು ಅವನ್ನು ಹಿಡಿಯಲು ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ವರ್ತಕ ರವಿ ಶಾನಭಾಗ ಒತ್ತಾಯಿಸಿದರು.
ಪಟ್ಟಣದ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಬೇಕು. ನಿಸರ್ಗಮನೆ ರಸ್ತೆಯಲ್ಲಿ ವಾಹನ ಸಂಚಾರ ಅತಿಯಾದಾಗ ಅಕ್ಕಪಕ್ಕದ ಮನೆಗೆ ದೂಳು ಹಾರುತ್ತದೆ. ಹಾಗಾಗಿ ಅಲ್ಲಿ ದಿನಕ್ಕೊಮ್ಮೆ ನೀರು ಸಿಂಪಡಿಸಬೇಕು. ದೇವಿದೇವಸ್ಥಾನ ರಸ್ತೆಯನ್ನು ಸುಧಾರಿಸಬೇಕು. ಪಟ್ಟಣದ ಪ್ರಮುಖ ರಸ್ತೆಗಳ ಹೊಂಡವನ್ನು ಮುಚ್ಚಬೇಕು. ರಾಷ್ಟ್ರೀಯ ಹೆದ್ದಾರಿಯ ನಾಯ್ಕನಕರೆ ತಿರುವಿನಿಂದ ಬಿಸಗೋಡ ರಸ್ತೆ ವರೆಗೆ ರೇಲಿಂಗ್ಸ ಸರಿಪಡಿಸಬೇಕು. ರಸ್ತೆಯ ಪಕ್ಕದ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಪೊಲೀಸ್ ಠಾಣೆಯಿಂದ ಸಂಭ್ರಮ ಹೋಟೆಲ್ವರೆಗೆ ಸಣ್ಣಪುಟ್ಟ ಅಂಗಡಿಕಾರರು ಕುಳಿತು ಜನ ಸಂಚಾರಕ್ಕೆ ತೊಂದರೆ ಆಗುತ್ತದೆ ಇದನ್ನು ಸರಿಪಡಿಸಬೇಕು’ ಎಂದು ಪ್ರಮುಖರು ಸಲಹೆ ನೀಡಿದರು.
ಗ್ರಾಮದೇವಿ ದೇವಸ್ಥಾನದ ಮ್ಯಾನೇಂಜಿಂಗ್ ಟ್ರಸ್ಟಿ ರಾಜೇಂದ್ರಪ್ರಸಾದ ಬಲವಂತ ಭಟ್, ತಹಶೀಲ್ದಾರ್ ಚಂದ್ರಶೇಖರ ಹೊಸ್ಮನಿ, ಪಿಐ ಸಿದ್ದು ಗುಡಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.