ADVERTISEMENT

ಜಿಲ್ಲಾ ಯುವ ಸಂಸತ್ ಸ್ಪರ್ಧೆ: ಗಜಾನನ ಪ್ರಥಮ, ಅಶ್ವಿನಿ ದ್ವಿತೀಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 12:53 IST
Last Updated 24 ಜನವರಿ 2019, 12:53 IST
ಶಿರಸಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ಯುವ ಸ್ಪರ್ಧಿಗಳು ಹಾಗೂ ಸ್ಪರ್ಧೆಯ ನಿರ್ಣಾಯಕರು
ಶಿರಸಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ಯುವ ಸ್ಪರ್ಧಿಗಳು ಹಾಗೂ ಸ್ಪರ್ಧೆಯ ನಿರ್ಣಾಯಕರು   

ಶಿರಸಿ: ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಎಂಇಎಸ್ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿ ಗಜಾನನ ಹೆಗಡೆ ಪ್ರಥಮ, ಅಶ್ವಿನಿ ಎಂ. ಭಟ್ಟ ಕಾರೇಕೊಪ್ಪ ದ್ವಿತೀಯ, ಅರಣ್ಯ ಕಾಲೇಜಿನ ವಿದ್ಯಾರ್ಥಿ ಜೋಯಲ್ ಫರ್ನಾಂಡೀಸ್ ತೃತೀಯ ಸ್ಥಾನ ಪಡೆದರು.

ರಾಜ್ಯ ಎನ್ಎಸ್ಎಸ್ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು, ನೆಹರು ಯುವ ಕೇಂದ್ರ ಕಾರವಾರ, ಅರಣ್ಯ ಕಾಲೇಜಿನ ಎನ್ಎಸ್ಎಸ್ ಯೋಜನೆ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಜಂಟಿಯಾಗಿ ಗುರುವಾರ ಇಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜು ಪಾಟೀಲ ನಾಲ್ಕನೇ ಸ್ಥಾನ, ಸಿದ್ಧು ಹರಿಜನ ಐದನೇ ಸ್ಥಾನ ಗಳಿಸಿದರು.

ಹೊನ್ನಾವರ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸತ್ ದೇಶದ ಮಹತ್ವದ ಭಾಗವಾಗಿದೆ. ದೇಶದಲ್ಲಿ ಕಾನೂನು ರಚಿಸುವಲ್ಲಿ ಸಂಸತ್ತಿನ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಸಂಸತ್ ಸದಸ್ಯರು ಈ ದೇಶದ ಕಣ್ಣು ಮತ್ತು ಕಿವಿ ಇದ್ದಂತೆ ಎಂದರು.

ADVERTISEMENT

ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಮಾತನಾಡಿ, ‘ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಬೇಕು. ಪೀಠಿಕೆಯಲ್ಲಿರುವ ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಂಡರೆ, ಸಂವಿಧಾನದ ಆಶಯ ಸ್ಪಷ್ಟವಾಗುತ್ತದೆ’ ಎಂದರು. ಕಾಲೇಜಿನ ಡೀನ್ ಕೆ.ಎಸ್. ಜಗದೀಶ ಅಧ್ಯಕ್ಷತೆ ವಹಿಸಿದ್ದರು.

ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಂಯೋಜಕ ವಿಪಿನ್‌ಕುಮಾರ ಚಟಾಯಮ್, ಸಂಘಟನಾ ಕಾರ್ಯದರ್ಶಿ ಪ್ರೊ. ರಮೇಶ ರಾಥೋಡ, ಡಿಸಿಎಫ್ ಗಣೇಶ ಭಟ್ಟ, ತುಷಾರ್ ಚಂದ್ರಘಟಗಿ ಇದ್ದರು. ನಂತರ ನಡೆದ ಸ್ಪರ್ಧೆಯ ನಿರ್ಣಾಯಕರಾಗಿ ಪ್ರೊ. ಆರ್.ವಾಸುದೇವ, ರೊಟೇರಿಯನ್ ರವಿ ಹೆಗಡೆ ಗಡಿಹಳ್ಳಿ, ವಕೀಲ ಗಣಪತಿ ಬಿಸಲಕೊಪ್ಪ, ನಗರಸಭೆ ಸದಸ್ಯ ಗಣಪತಿ ನಾಯ್ಕ ಪಾಲ್ಗೊಂಡರು.

25 ವರ್ಷದೊಳಗಿನ 45ಕ್ಕೂ ಹೆಚ್ಚು ಯುವ ಜನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೊದಲ ಮೂರು ಸ್ಥಾನ ಪಡೆದವರು ಫೆ.6ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.