ಕಾರವಾರ: ಸುಳ್ಳು ದಾಖಲೆ ಸಲ್ಲಿಸಿ ವಿವಾಹ ನೋಂದಣಿ ಮಾಡಿಸಿದ ಯುಟ್ಯೂಬರ್ ಖ್ವಾಜಾ ಬಂದೆನವಾಜ್ (ಮುಕಳೆಪ್ಪ) ಹಾಗೂ ಹುಬ್ಬಳ್ಳಿಯ ಹಿಂದೂ ಯುವತಿಯ ವಿವಾಹ ನೋಂದಣಿ ರದ್ದುಪಡಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ದೂರು ಸಲ್ಲಿಸಿದರು.
‘ಧಾರವಾಡದ ಯುವಕ, ಹುಬ್ಬಳ್ಳಿಯ ಯುವತಿ ಮೇ 3ರಂದು ಮುಂಡಗೋಡ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಂದೇ ಬಾಡಿಗೆ ಕರಾರು ಮಾಡಿದ ದಾಖಲೆ ಸಲ್ಲಿಸಿ ವಿವಾಹ ನೋಂದಣಿ ಮಾಡಿಸಿದ್ದಾರೆ. ಅನ್ಯ ಧರ್ಮದ ಯುವಕ, ಯುವತಿ ವಿವಾಹ ನೋಂದಣಿಗೆ ಕನಿಷ್ಠ ಒಂದು ತಿಂಗಳು ಕಾಲಾವಕಾಶ ನೀಡಬೇಕು. ಈ ನಿಯಮ ಗಾಳಿಗೆ ತೂರಿ ಅಧಿಕಾರಿಗಳು ನೋಂದಣಿ ಮಾಡಿದ್ದಾರೆ’ ಎಂದು ಆರೋಪಿಸಿದರು.
‘130 ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ನಂತೆ ಹೋಳಾಗಿ, ಹಾಳಾಗಿ ದೇಶ ಹಾಳು ಮಾಡಿದ ಸಂಘಟನೆ ಆರ್ಎಸ್ಎಸ್ ಅಲ್ಲ. ನೂರು ವರ್ಷ ಪೂರೈಸಿದ ನಂತರವೂ ಒಡೆಯದೆ, ಒಗ್ಗೂಡಿ ನಿಂತಿದೆ. ಸ್ವಯಂ ಸೇವಕರ ಧ್ವನಿ ಹತ್ತಿಕ್ಕಲು ಆಸಕ್ತಿ ತೋರುತ್ತಿರುವ ಕಾಂಗ್ರೆಸ್ ವಿಧಾನಸೌಧದಲ್ಲಿ, ರಾಜ್ಯದ ವಿವಿಧೆಡೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಕ್ರಮ ಜರುಗಿಸಲಿಲ್ಲ’ ಎಂದರು.
ಶ್ರೀರಾಮ ಸೇನೆ ಉತ್ತರ ಪ್ರಾಂತದ ಅಧ್ಯಕ್ಷ ಜಯಂತ ನಾಯ್ಕ, ಸಂತೋಷ ನಾಯ್ಕ, ಸಂದೀಪ ನಾಯ್ಕ, ಮಂಜುನಾಥ ಕೆ.ಜಿ, ಇತರರು ಜತೆಯಲ್ಲಿದ್ದರು.
ವಿವಾಹ ನೋಂದಣಿ ರದ್ದುಪಡಿಸಿ ಉಪನೋಂದಣಾಧಿಕಾರಿ ಮತ್ತು ಕೃತ್ಯಕ್ಕೆ ಸಹಕರಿಸಿದ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು. ಪ್ರಕರಣದ ತನಿಖಾಧಿಕಾರಿ ಬದಲಾಯಿಸಬೇಕುಪ್ರಮೋದ ಮುತಾಲಿಕ್ ಶ್ರೀರಾಮ ಸೇನೆ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.