ADVERTISEMENT

ಕಾರವಾರದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 14:34 IST
Last Updated 25 ಜೂನ್ 2022, 14:34 IST
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜುಲೈ 8ರಿಂದ 10ರವರೆಗೆ ಕಾರವಾರದಲ್ಲಿ ಹಮ್ಮಿಕೊಂಡಿರುವ ಒಳಾಂಗಣ ಕ್ರೀಡಾಕೂಟದ ಭಿತ್ತಿಪತ್ರವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಬಿಡುಗಡೆ ಮಾಡಿದರು. ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ ಸಿ.ಇ.ಒ ಪ್ರಿಯಾಂಗಾ.ಎಂ ಇದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜುಲೈ 8ರಿಂದ 10ರವರೆಗೆ ಕಾರವಾರದಲ್ಲಿ ಹಮ್ಮಿಕೊಂಡಿರುವ ಒಳಾಂಗಣ ಕ್ರೀಡಾಕೂಟದ ಭಿತ್ತಿಪತ್ರವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಬಿಡುಗಡೆ ಮಾಡಿದರು. ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ ಸಿ.ಇ.ಒ ಪ್ರಿಯಾಂಗಾ.ಎಂ ಇದ್ದಾರೆ.   

ಕಾರವಾರ: ನಗರದಲ್ಲಿ ಕ್ರೀಡಾಪಟುಗಳಿಗೆ ದೊಡ್ಡ ಕೊರತೆಯಾಗಿರುವ ಒಳಾಂಗಣ ಕ್ರೀಡಾಂಗಣ ಸ್ಥಾಪ‍ನೆಗೆ ಜಿಲ್ಲಾ ಪಂಚಾಯಿತಿ ಆಸಕ್ತಿ ತೋರಿದೆ. ನಗರದ ಕ್ರೀಡಾ ವಸತಿ ಶಾಲೆಯ ಹಿಂಭಾಗದಲ್ಲಿರುವ ಸ್ಥಳದಲ್ಲಿ ಆರಂಭಿಸಲು ಸರ್ಕಾರಕ್ಕೆ ಪ‍್ರಸ್ತಾವ ಸಲ್ಲಿಕೆಯಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ, ‘ಅಂದಾಜು ₹2 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಈಗಾಗಲೇ ₹50 ಲಕ್ಷವಿದೆ. ಉಳಿದ ಮೊತ್ತವನ್ನು ಸರ್ಕಾರದಿಂದ ಅನುದಾನ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಲಾಗಿದೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ತಿಳಿಸಿದರು.

‘ಕ್ರೀಡಾಂಗಣ ನಿರ್ಮಾಣವಾದರೆ ಬ್ಯಾಡ್ಮಿಂಟನ್‌, ವಾಲಿಬಾಲ್, ಕಬಡ್ಡಿ ಮುಂತಾದ ಒಳಾಂಗಣ ಕ್ರೀಡೆಗಳಿಗೆ ಅವಕಾಶ ಸಿಗಲಿದೆ. ಅಲ್ಲದೇ ನಗರದಲ್ಲಿ ಸೂಕ್ತವಾದ ಸೌಲಭ್ಯವೊಂದು ನಿರ್ಮಾಣವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ವಿವಿಧ ಸ್ಪರ್ಧೆಗಳು ಜುಲೈ 8ರಿಂದ:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜುಲೈ 8ರಿಂದ 10ರವರೆಗೆ ನಗರದ ಮಿತ್ರ ಸಮಾಜ, ಆಫೀಸರ್ಸ್ ಕ್ಲಬ್ ಹಾಗೂ ಎನ್.ಜಿ.ಒ ಸಭಾಂಗಣದಲ್ಲಿ ವಿವಿಧ ಒಳಾಂಗಣ ಕ್ರೀಡೆಗಳನ್ನು ಹಮ್ಮಿಕೊಂಡಿದೆ.

ಸಿಂಗಲ್ಸ್ ಮತ್ತು ಡಬಲ್ಸ್ ಮುಕ್ತ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಚೆಸ್, ಕೇರಂ ಪಂದ್ಯಾವಳಿಗಳಿವೆ. 21 ವರ್ಷಕ್ಕಿಂತ ಮೇಲಿನವರು, 18ರಿಂದ 21 ವರ್ಷದ ಒಳಗಿನವರು ಎಂಬ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಆಸಕ್ತ ಕ್ರೀಡಾಪಟುಗಳು ವಯಸ್ಸಿನ ದೃಢೀಕರಣ ಪತ್ರವನ್ನು ತರಬೇಕು. ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರವನ್ನು ಪರಿಗಣಿಸಬಹುದು. ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್‌ಗೆ ರ‍್ಯಾಕೆಟ್‌ಗಳನ್ನು ತರಬೇಕು. ಬ್ಯಾಡ್ಮಿಂಟನ್ ಸ್ಪರ್ಧಿಗಳು ನೋ ಮಾರ್ಕ್ ಶೂಗಳನ್ನು ಕಡ್ಡಾಯವಾಗಿ ಧರಿಸಬೇಕು.

ಆಸಕ್ತರು ಜುಲೈ 5ರ ಸಂಜೆ 4 ಗಂಟೆಯ ಮೊದಲು ₹100 ಶುಲ್ಕದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಈ ಹಣವನ್ನು ಸ್ಪರ್ಧೆಯ ಬಳಿಕ ವಾಪಸ್ ನೀಡಲಾಗುತ್ತದೆ. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕುಗಳಲ್ಲಿರುವ ಇಲಾಖೆಯ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಬಹುದು.

ಮೊಬೈಲ್ ದೂರವಾಣಿ: ಪ್ರಕಾಶ ರೇವಣಕರ್ 98807 48821, ಸಂಜೀವ ಕುಮಾರ ನಾಯ್ಕ 94487 29177 ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.