ಬೆಂಗಳೂರು: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮಾರುಕಟ್ಟೆಗಳಿಗೆ ತರಕಾರಿ ಆವಕ ಪ್ರಮಾಣ ಕಡಿಮೆಯಾಗಿದ್ದು, ತರಕಾರಿ ದರಗಳು ದಿಢೀರ್ ಏರಿಕೆ ಕಂಡಿವೆ.
ಕ್ಯಾರೆಟ್, ಬೀನ್ಸ್, ತೊಂಡೇಕಾಯಿ, ಎಲೆಕೋಸು, ಟೊಮೆಟೊ ಹಾಗೂ ಆಲೂಗಡ್ಡೆ ದರಗಳು ಶನಿವಾರದಿಂದ ಹೆಚ್ಚಾಗಿದೆ. ದಾಸನಪುರ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಈ ಎಲ್ಲ ತರಕಾರಿಗಳ ದರ ₹5ರಿಂದ ₹10ರವರೆಗೆ ಏರಿಕೆಯಾಗಿದೆ.
'ಗಣೇಶ ಚತುರ್ಥಿ ಬಳಿಕ ತರಕಾರಿ ದರಗಳು ಕುಸಿದಿದ್ದವು. ರಾಜ್ಯದಲ್ಲಿ ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ತರಕಾರಿ ಬೆಳೆಗಳು ಹಾನಿಯಾಗಿವೆ. ಇದರಿಂದ ಮಾರುಕಟ್ಟೆಗೆ ಆವಕ ಕಡಿಮೆಯಾಗಿ, ಬೆಲೆಗಳು ಹೆಚ್ಚಾಗಿವೆ' ಎಂದು ದಾಸನಪುರ ಮಾರುಕಟ್ಟೆಯ ತರಕಾರಿ ಮತ್ತು ಸೊಪ್ಪು ಸಗಟು ವ್ಯಾಪಾರಿ ಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು.
'ಕಳೆದ ವಾರ ಬೀನ್ಸ್ ಪ್ರತಿ ಕೆ.ಜಿ.ಗೆ ₹40ರಷ್ಟಿತ್ತು. ಈಗ ₹60ಕ್ಕೇರಿದೆ. ₹30ರಂತೆ ಮಾರಾಟವಾಗುತ್ತಿದ್ದ ಕ್ಯಾರೆಟ್, ಪ್ರತಿ ಕೆ.ಜಿ.ಗೆ ₹70ರಂತೆ ಖರೀದಿಯಾಗುತ್ತಿದೆ'ಎಂದರು.
ಸೊಪ್ಪಿನ ದರ ಕುಸಿತ: 'ಸೊಪ್ಪಿನ ದರಗಳು ಕಳೆದ ವಾರದಿಂದ ಕಡಿಮೆ ಆಗಿವೆ. ಪ್ರತಿ ಕಟ್ಟಿಗೆ ₹30ರಂತೆ ಮಾರಾಟವಾಗುತ್ತಿದ್ದ ಕೊತ್ತಂಬರಿ, ಈಗ ₹12ಕ್ಕೆ ಕುಸಿದಿದೆ. ಮೆಂತ್ಯೆ, ಪಾಲಕ್, ಸಬ್ಬಕ್ಕಿ, ದಂಟು ಸೊಪ್ಪಿನ ದರಗಳು ₹10ರ ಒಳಗಿವೆ' ಎಂದು ಸೊಪ್ಪಿನ ವ್ಯಾಪಾರಿಯೊಬ್ಬರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.