ಪ್ರಾತಿನಿಧಿಕ ಚಿತ್ರ
ಹೊಸಪೇಟೆ (ವಿಜಯನಗರ): ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆರಂಭವಾಗಿರುವ ಅಹೋರಾತ್ರಿ ಧರಣಿ ಎರಡನೇ ದಿನವಾದ ಬುಧವಾರ ಸಹ ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಸಮೀಪ ರಸ್ತೆ ಬದಿಯಲ್ಲಿ ಮುಂದುವರಿದಿದ್ದು, ಗುರುವಾರದವರೆಗೂ ನಡೆಸಲು ನಿರ್ಧರಿಸಿದ್ದಾರೆ.
ಬುಧವಾರ ಪ್ರತಿಭಟನನಿರತರ ಬಳಿಗೆ ಬಂದ ಡಿಎಚ್ಒ ಡಾ.ಎಲ್.ಆರ್.ಶಂಕರ್ ನಾಯ್ಕ್, ಆರ್.ಸಿ.ಎಚ್ ಅಧಿಕಾರಿ ಡಾ.ಜಂಬಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್ಎಸ್) ರಾಜ್ಯ ಘಟಕದ ಅಧ್ಯಕ್ಷೆ ಮಂಜುಳಾ ಎಂ.ಎನ್. ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು. ದುಡಿಯುವ ಜನ ಅದರಲ್ಲಿಯೂ ಮಹಿಳೆಯರು ಹೋರಾಟಕ್ಕೆ ಧುಮಿಕಿದಾಗ ಇತಿಹಾಸ ಸೃಷ್ಟಿಯಾಗಿದೆ, ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆ ಯರ ಹೋರಾಟ ಎಲ್ಲರಿಗೂ ಮಾದರಿ ಎಂದರು.
ವಿಎಸ್ಕೆಯು ಸಿಂಡಿಕೇಟ್ ಸದಸ್ಯ ಎಂ.ಪೀರ್ಬಾಷಾ ಮಾತನಾಡಿ, ದುಡಿಮೆಗೆ ತಕ್ಕ ವೇತನ ಬೇಕು. ಗೌರವಯುತ ಸಂಭಾವನೆಯನ್ನು ಪಡೆಯುಲು ಹೆಣ್ಣುಮಕ್ಕಳನ್ನು ಬೀದಿಗೆ ತಳ್ಳಿದ ಸರ್ಕಾರಗಳಿಗೆ ನಾಚಿಕೆಯಾಗಬೇಕು ಎಂದರು.
ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಗೋವಿಂದ, ಎಐಡಿವೈಒ ಸಂಘಟನೆಯ ಪಂಪಾಪತಿ ಮಾತನಾಡಿದರು.
ಆಶಾ ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಾ.ಪ್ರಮೋದ್, ಜಿಲ್ಲಾ ಅಧ್ಯಕ್ಷೆ ಗೀತಾ ಪಿ.ಎ., ಕಾರ್ಯದರ್ಶಿ ಗೌರಮ್ಮ ಕೆ.ಎಸ್. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.