ADVERTISEMENT

ಕೂಡ್ಲಿಗಿ: ಪ್ರಯಾಣಿಕರ ₹40 ಸಾವಿರ ಹಣ, ದಾಖಲೆಗಳನ್ನು ಹಿಂದಿರುಗಿಸಿದ ಆಟೊ ಚಾಲಕ

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 15:17 IST
Last Updated 17 ಜೂನ್ 2023, 15:17 IST
   

ಕೂಡ್ಲಿಗಿ (ವಿಜಯನಗರ ಜಿಲ್ಲೆ): ಪಟ್ಟಣದ ರತ್ನಮ್ಮ ಎಂಬ ಮಹಿಳೆ ಆಟೋರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ₹ 40 ಸಾವಿರ ಹಾಗೂ ದಾಖಲೆಗಳನ್ನು ಮರಳಿ ನೀಡುವ ಮೂಲಕ ಆಟೊ ಚಾಲಕ ಗಿರೀಶ್ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ರತ್ನಮ್ಮ ಖಾಸಗಿ ಆಸ್ಪತ್ರೆಯಿಂದ ಆಟೊದಲ್ಲಿ ಮನೆಗೆ ಹೋಗಿದ್ದು, ಆಟೊ ಇಳಿಯುವಾಗ ತನ್ನ ಕೈಯಲ್ಲಿದ್ದ ಚೀಲವನ್ನು ಮರೆತಿದ್ದರು. ನಂತರ ಗಿರೀಶ್ ಮರಳಿ ಬಂದಾಗ ಆಟೊದಲ್ಲಿ ಚೀಲ ಇರುವುದು ಗಮನಕ್ಕೆ ಬಂದಿದ್ದು, ಅದನ್ನು ಪರಿಶೀಲಿಸಿದಾಗ ಚೀಲದಲ್ಲಿ ₹40 ಸಾವಿರ ನಗದು ಹಾಗೂ ಆಧಾರ್ ಕಾರ್ಡ್ ಪತ್ತೆಯಾಯಿತು. ಇತ್ತ ರತ್ನಮ್ಮ ಅವರಿಗೆ ತನ್ನ ಚೀಲವನ್ನು ಆಟೊದಲ್ಲಿ ಬಿಟ್ಟು ಬಂದಿರುವುದು ಗಮನಕ್ಕೆ ಬಂದಿದ್ದು, ಆಟೊ ಪತ್ತೆ ಹಚ್ಚಲು ಮುಂದಾಗಿದ್ದರು. ಅಷ್ಟರಲ್ಲಿ ಆಧಾರ್ ಕಾರ್ಡಿನಲ್ಲಿನ ಪೋನ್ ಸಂಖ್ಯೆಯ ಮುಖಾಂತರ ರತ್ನಮ್ಮ ಅವರನ್ನು ಸಂಪರ್ಕಿಸಿದ ಗಿರೀಶ್, 40 ಸಾವಿರ ನಗದು ಹಾಗೂ ದಾಖಲೆಗಳನ್ನು ಸಿಆರ್ ಪಿಎಫ್ ಮಾಜಿ ಯೋಧ ಕಾಟೇಶ್ ರಮೇಶ್ ಸಮ್ಮುಖದಲ್ಲಿ ಮರಳಿ ನೀಡುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದರು.

ಆಟೋರಿಕ್ಷಾ ಚಾಲಕನ ಪ್ರಾಮಾಣಿಕತೆಗೆ ತಾಲ್ಲೂಕು ಆಟೊ ಚಾಲಕರ ಸಂಘದ ಅಧ್ಯಕ್ಷ ಮಂಜು ಮಯೂರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.