ಹಗರಿಬೊಮ್ಮನಹಳ್ಳಿ: ಆಷಾಢದಲ್ಲಿ ಮಲ್ಲಿಗೆ ಹೂವಿಗೆ ಉತ್ತಮ ಬೆಲೆ ಸಿಗದೇ ಪರದಾಡುತ್ತಿದ್ದ ರೈತರಿಗೆ ಬಕ್ರೀದ್ ಕಾರಣಕ್ಕೆ ಉತ್ತಮ ಬೆಲೆ ದೊರೆತಿದೆ.
ತಾಲ್ಲೂಕಿನಲ್ಲಿ 316 ಹೆಕ್ಟೇರ್ನಲ್ಲಿ ಹಡಗಲಿ ಮಲ್ಲಿಗೆ ಬೆಳೆಯಲಾಗಿದೆ. ಪಿಂಜಾರ್ ಹೆಗ್ಡಾಳು ಗ್ರಾಮದಲ್ಲಿ ಶೇಕಡ 70ರಷ್ಟು ರೈತರು ಮಲ್ಲಿಗೆ ಬೆಳೆದಿದ್ದಾರೆ. ಹೊಸ ಆನಂದೇವನಹಳ್ಳಿ, ಹಂಪಾಪಟ್ಟಣ, ಕಡಲಬಾಳು, ಬ್ಯಾಸಿಗಿದೇರಿ, ಶಿವಾನಂದನಗರ, ಕೇಶವರಾಯನಬಂಡಿ, ಕೆಚ್ಚಿನಬಂಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೂರಾರು ರೈತರು ಮಲ್ಲಿಗೆಯಿಂದಲೇ ಬದುಕು ಕಂಡುಕೊಂಡಿದ್ದಾರೆ.
ಮಹಿಳಾ ಕಾರ್ಮಿಕರಿಗೆ ಮಲ್ಲಿಗೆ ಬಿಡಿಸುವ ಕಾರ್ಯ ವರದಾನವಾಗಿದೆ. ಪ್ರತಿ ಕೆ.ಜಿಗೆ ₹ 100 ದೊರೆಯುತ್ತದೆ. ತಾಲ್ಲೂಕಿನಿಂದ ನಿತ್ಯ ನಾಲ್ಕು ಟನ್ ಮಲ್ಲಿಗೆ ಹೊಸಪೇಟೆ, ಗಂಗಾವತಿ, ಕೊಟ್ಟೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಚಿತ್ರದುರ್ಗ ಸೇರಿದಂತೆ ಹೊರ ರಾಜ್ಯಗಳಿಗೂ ರವಾನೆಯಾಗುತ್ತಿದೆ.
‘ಪ್ರತಿ ಆಷಾಢದಲ್ಲಿ ಕೆ.ಜಿ. ಮಲ್ಲಿಗೆಗೆ ಕೇವಲ ₹100–₹120 ದೊರೆಯುತ್ತಿತ್ತು. ಕಾರ್ಮಿಕರ, ಸಾರಿಗೆ ವೆಚ್ಚ ಸೇರಿದಂತೆ ರೈತರ ಕೈಗೆ ಅಲ್ಪಸ್ವಲ್ಪ ಆದಾಯ ಮಾತ್ರ ಸೇರುತ್ತಿತ್ತು. ಆದರೆ ಈ ಬಾರಿ ಬಕ್ರೀದ್ ಕಾರಣಕ್ಕಾಗಿ ₹300 ಸಿಗುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ’ ಎನ್ನುತ್ತಾರೆ ಪಿಂಜಾರ್ ಹೆಗ್ಡಾಳು ಗ್ರಾಮದ ರೈತ ಜೆ.ಎಂ.ಚಂದ್ರಾಧರ ಸ್ವಾಮಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.