ADVERTISEMENT

‘ಸಮ ಸಮಾಜದ ಆಂದೋಲನದ ರೂವಾರಿ ಬಸವಣ್ಣ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 12:04 IST
Last Updated 28 ನವೆಂಬರ್ 2022, 12:04 IST
ಹೊಸಪೇಟೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಯು. ರಾಘವೇಂದ್ರರಾವ್‌ ಮಾತನಾಡಿದರು
ಹೊಸಪೇಟೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಯು. ರಾಘವೇಂದ್ರರಾವ್‌ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ಜಾತ್ಯತೀತ ನವ ಸಮಾಜ, ಸಮ ಸಮಾಜದ ಆಂದೋಲನದ ರೂವಾರಿ 12ನೇ ಶತಮಾನದ ಬಸವಣ್ಣ’ ಎಂದು ಲೇಖಕ ಯು. ರಾಘವೇಂದ್ರರಾವ್‌ ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆಯ ಸಹಭಾಗಿತ್ವದಲ್ಲಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಒಡಿಸಿದ್ದ 154ನೇ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು ವರ್ಣಾಶ್ರಮ, ಮೇಲು –ಕೀಳು, ಅಂದಿನ ಸಾಮಾಜಿಕ ಪಿಡುಗುಗಳ ವಿರುದ್ಧ ಶರಣರ ಆಂದೋಲನ ರೂಪಿಸಿ, ಸಮಾನತೆಗೆ ಶ್ರಮಿಸಿದರು ಎಂದು ಹೇಳಿದರು.

ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕನ್ನಡ ಭಾಷೆಯನ್ನೇ ಸಮರ್ಥವಾಗಿ ಬಳಸಿಕೊಂಡರು. ವಚನಗಳನ್ನು ಕನ್ನಡದಲ್ಲಿಯೇ ಬರೆದು ಕನ್ನಡ ಸಾಹಿತ್ಯಕ್ಕೆ ಮತ್ತಷ್ಟು ಗಟ್ಟಿ ಅಡಿಪಾಯ ಹಾಕಿದರು. ಜಾಗತಿಕ ಸಾಹಿತ್ಯಕ್ಕೆ ಶರಣ ಸಾಹಿತ್ಯ ಬಹುದೊಡ್ಡ ಕೊಡುಗೆ. ವಚನ ಸಾಹಿತ್ಯದಷ್ಟು ಉತ್ಕೃಷ್ಟವಾದ ಸಾಹಿತ್ಯ ಜಗತ್ತಿನಲ್ಲಿ ಬೇರೆ ಯಾವ ಸಾಹಿತ್ಯದಲ್ಲೂ ಇಲ್ಲ ಎಂದು ತಿಳಿಸಿದರು.

ADVERTISEMENT

ಬಸವಣ್ಣನವರ ವಚನಗಳಲ್ಲಿ ಮಾನವೀಯತೆ, ಪ್ರಾಮಾಣಿಕತೆ, ನೈತಿಕತೆ ಇದೆ. 12ನೇ ಶತಮಾನದ ಮಹಾ ಮಾಣಿಕ್ಯ ಬಸವಣ್ಣನವರು. ನಾಗರಿಕ ಜಗತ್ತಿಗೆ ಮಾನವೀಯತೆಯ ಸ್ಪರ್ಶ ಕೊಟ್ಟವರು ಅವರು. ಎಲ್ಲ ರೀತಿಯ ತಾರತಮ್ಯವನ್ನು ವಿರೋಧಿಸಿ ಸಮ ಸಮಾಜಕ್ಕಾಗಿ ದುಡಿದ ಶ್ರೇಷ್ಠ ಸಮಾಜ ಸುಧಾರಕ ಎಂದು ಬಣ್ಣಿಸಿದರು.

ಪ್ರಾಧ್ಯಾಪಕ ನಾಗರಾಜ ಪತ್ತಾರ ವಚನ ಗಾಯನ ಮಾಡಿದರು. ಪರಿಷತ್ತಿನ ಅಧ್ಯಕ್ಷೆ ಸೌಭಾಗ್ಯಲಕ್ಷ್ಮಿ, ಕಾಲೇಜಿನ ಪ್ರಾಂಶುಪಾಲ ಜೆ. ಸಿದ್ದರಾಮ, ಸಾಹಿತಿ ಉಮಾ ಮಹೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.