ಹೊಸಪೇಟೆ (ವಿಜಯನಗರ): ವೈದ್ಯಕೀಯ ಕ್ಷೇತ್ರದಲ್ಲಿ ಕೊರತೆಗಳು ಸಹಜ, ಹೊಸಪೇಟೆ ಸಹ ಅದಕ್ಕೆ ಹೊರತಲ್ಲ, ಆದರೆ ರೋಟರಿ ಸಂಸ್ಥೆ ಈ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ಪ್ರಶಂಸೆಯ ನುಡಿಗಳು ಶನಿವಾರ ಇಲ್ಲಿ ಮಾರ್ದನಿಸಿದವು.
ಹೊಸಪೇಟೆ ರೋಟರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಮಾರು ₹1.20 ಕೋಟಿ ವೆಚ್ಚದಲ್ಲಿ (ಕಟ್ಟಡ ಹೊರತಾಗಿ) ವೈ.ಉಮಾಮಹೇಶ್ವರ ರಾವ್ ರೋಟರಿ ರಕ್ತ ಕೇಂದ್ರವನ್ನು ಶನಿವಾರ ಉದ್ಘಾಟಿಸಿದ ಬಳಿಕ ಸಂಸದ ಇ.ತುಕಾರಾಂ, ಶಾಸಕರಾದ ಎಚ್.ಆರ್.ಗವಿಯಪ್ಪ, ಅನ್ನಪೂರ್ಣಾ ತುಕಾರಾಂ ಅವರು ಈ ಪ್ರಶಂಸೆಯ ನುಡಿಗಳನ್ನು ಆಡಿದರು.
ಮಂಡ್ಯದ ಸಮಾಜ ಸೇವಕ ಹಾಗೂ ಪದ್ಮಶ್ರೀ ಪುರಸ್ಕೃತ ವಿಶೇಷ ಚೇತನ ಕೆ.ಎಸ್.ರಾಜಣ್ಣ ಅವರು ಮಾತನಾಡಿ, ‘ಅನ್ನಕ್ಕಿಂತ ದೊಡ್ಡ ದಾನ ರಕ್ತದಾನ, ರೋಟರಿ ಸಂಸ್ಥೆ ಅಂತಹ ಅಮೋಘ ಕೆಲಸ ಮಾಡಿದೆ’ ಎಂದರು.
‘ಸಿಎಂ ಸಿದ್ದರಾಮಯ್ಯ ನನಗೆ ಜೀವ ಕೊಟ್ಟಿದ್ದಾರೆ, ಪಿಎಂ ನರೇಂದ್ರ ಮೋದಿ ಜೀವನ ಕೊಟ್ಟಿದ್ದಾರೆ. ನನ್ನಂತಹ ವಿಶೇಷ ಚೇತನರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಕೆಲಸ ಆಗಬೇಕು, ಇದರಿಂದ ಸಮಾಜಕ್ಕೆ ಬಹಳಷ್ಟು ಉಪಯೋಗ ಇದೆ’ ಎಂದರು.
ರೋಟರಿ ಜಿಲ್ಲಾ ಗವರ್ನರ್ ಸಾಧು ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ರಕ್ತ ಕೇಂದ್ರಕ್ಕೆ ದಾನ ನೀಡಿದ ಹೋಟೆಲ್ ಉದ್ಯಮಿ ಶ್ರೀನಿವಾಸ ರಾವ್ ದಂಪತಿಯನ್ನು ಸನ್ಮಾನಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ್, ರೋಟರಿಯ ಬಿ.ಚಿನ್ನಪ್ಪ ರೆಡ್ಡಿ, ಮಾಜಿ ಸಚಿವ ಆನಂದ್ ಸಿಂಗ್, ರೋಟರಿ ಕ್ಲಬ್ ಅಧ್ಯಕ್ಷ ದೀಪಕ್ ಕುಮಾರ್ ಕೊಳಗದ್, ಕಾರ್ಯದರ್ಶಿ ಎಂ.ಆರ್.ವೀರಭದ್ರ, ರಕ್ತಕೇಂದ್ರದ ಅಧ್ಯಕ್ಷ ವಿಜಯ್ ಎಂ.ಸಿಂದಗಿ ಇತರರು ಇದ್ದರು.
- ಕೈಹಾಕಿದ ಕ್ಷೇತ್ರದಲ್ಲಿ ಯಶಸ್ವಿ ಸೇವೆ ಇತರೆಡೆಗಳಿಗಿಂತ ಕಡಿಮೆ ಶುಲ್ಕ ಸಿಂಗಲ್ ಡೋನರ್ ಪ್ಲೇಟ್ಲೆಟ್ ಯಂತ್ರ (ಎಸ್ಡಿಪಿ) ಇಲ್ಲಿನ ವಿಶೇಷ
ಹೊಸಪೇಟೆಯಲ್ಲಿ ದಾನ ಪರಂಪರೆಗೆ ಹತ್ತಾರು ವರ್ಷಗಳ ಇತಿಹಾಸ ಇದೆ. ಅದು ಮುಂದುವರಿದಿರುವುದು ಖುಷಿಯ ವಿಚಾರ. ರೋಟರಿ ಸಂಸ್ಥೆ ಇಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದೆ
-ಎಚ್.ಆರ್.ಗವಿಯಪ್ಪ ಶಾಸಕ
ಕಡಿಮೆ ದರದಲ್ಲಿ ರಕ್ತ ಹೊಸಪೇಟೆ ರೋಟರಿಯಲ್ಲಿ ಪ್ರತಿವರ್ಷ ಅತ್ಯಂತ ಕ್ರಿಯಾಶೀಲರೇ ಅಧ್ಯಕ್ಷ ಹಾಗೂ ಇತರ ಹೊಣೆ ಹೊತ್ತುಕೊಂಡು ಕೆಲಸ ಮಾಡುತ್ತಿದ್ದು ಹಾಲಿ ಅಧ್ಯಕ್ಷ ದೀಪಕ್ ಅವರ ಅಧಿಕಾರ ಅವಧಿಯ ಕೊನೆಯಲ್ಲಿ ರಕ್ತ ಕೇಂದ್ರ ರೂಪದಲ್ಲಿ ದೊಡ್ಡ ಕೊಡುಗೆ ಸಮಾಜಕ್ಕೆ ದೊರೆತಿದೆ. ಇಲ್ಲಿ ಇತರ ಕಡೆಗಳಿಗೆ ಹೋಲಿಸಿದರೆ ಅಗ್ಗದ ದರದಲ್ಲಿ ರಕ್ತ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.