ಮರಿಯಮ್ಮನಹಳ್ಳಿ: ಸಮೀಪದ ನಂದಿಬಂಡಿ ಗ್ರಾಮದಲ್ಲಿ ಶನಿವಾರ ನಡೆದಿದ್ದ ಮನೆಗಳ್ಳನ ಪ್ರಕರಣವನ್ನು ಕೇವಲ 24ತಾಸಿನಲ್ಲಿ ಪತ್ತೆ ಹಚ್ಚಿದ ಸ್ಥಳೀಯ ಪೊಲೀಸರು, ಆರೋಪಿಯನ್ನು ಬಂಧಿಸಿ ಆತನಿಂದ ₹53ಸಾವಿರ ಮೌಲ್ಯದ ಬಂಗಾರ–ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನಂದಿಬಂಡಿ ಗ್ರಾಮದ ಯು.ಮಹೇಶ(35) ಬಂಧಿತ ಆರೋಪಿ.
ಘಟನೆ ವಿವರ:
ನಂದಿಬಂಡಿ ಗ್ರಾಮದ ಪುಷ್ಪ ಹಾಗೂ ಅವರ ಮನೆಯವರು ಶನಿವಾರ ಬೆಳಿಗ್ಗೆ 10ಗಂಟೆಗೆ ಮನೆಯ ಬೀಗ ಹಾಕಿ ಕೆಲಕ್ಕೆ ಹೋಗಿದ್ದಾರೆ. ಮಧ್ಯಾಹ್ನ ಮನೆಗೆ ವಾಪಾಸು ಬಂದಾಗ ಮನೆ ಕಳ್ಳತನವಾಗಿದ್ದು ಗೊತ್ತಾಗಿದೆ. ಮನೆಯ ಬೀಗ ಮುರಿದು ಒಳಗಡೆಯಿದ್ದ ಅಲೆಮಾರದಲ್ಲಿದ್ದ ₹25ಸಾವಿರ ಮೌಲ್ಯದ 4 ಗ್ರಾಂ ಚಿನ್ನದ ಬೆಂಡೋಲೆ, ₹10ಸಾವಿರ ಮೌಲ್ಯದ 2 ಗ್ರಾಂ ಚಿನ್ನದುಂಗುರ, ಸಾವಿರ ರೂಪಾಯಿ ಬೆಲೆಬಾಳುವ ಮೂಗುತಿ, ₹17ಸಾವಿರ ಮೌಲ್ಯದ 27ಗ್ರಾಂನ ಎರಡು ಜೊತೆ ಬೆಳ್ಳಿ ಕಾಲುಗೆಜ್ಜೆ ಹಾಗೂ ₹15ಸಾವಿರ ನಗದು ಸೇರಿದಂತೆ ಒಟ್ಟು ₹68ಸಾವಿರ ನಗದು ಹಾಗೂ ಆಭರಣಗಳನ್ನು ಕಳ್ಳತನವಾದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭಾನುವಾರ ಅದೇ ಗ್ರಾಮದ ಆರೋಪಿ ಮಹೇಶನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.