ಹೊಸಪೇಟೆ (ವಿಜಯನಗರ): ವೇತನ ಹಿಂಬಾಕಿ ಪಾವತಿ ಸಹಿತ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರ ಜಿಲ್ಲೆಯಲ್ಲಿ ಮಂಗಳವಾರ ನಡೆಯಲಿಲ್ಲ. ಹೀಗಾಗಿ ಜಿಲ್ಲೆಯೊಳಗೆ ಸಾರಿಗೆ ಬಸ್ಗಳ ಸಂಚಾರ ಬಹುತೇಕ ಸಹಜ ಸ್ಥಿತಿಯಲ್ಲಿತ್ತು.
ನಗರದಿಂದ ಜಿಲ್ಲೆಯೊಳಗಿನ ಎಲ್ಲಾ ಪ್ರದೇಶಗಳಿಗೆ ಬಸ್ಗಳ ಓಡಾಟ ಎಂದಿನಂತೆಯೇ ಇದ್ದರೆ, ಹೊರ ಜಿಲ್ಲೆಗಳಿಗೂ ಬಹುತೇಕ ಬಸ್ಗಳು ಸಂಚಾರ ನಡೆಸಿದವು. ಶೇ 97ರಷ್ಟು ಬಸ್ಗಳು ಸಂಚಾರ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನಮ್ಮಲ್ಲಿ ಸಿಬ್ಬಂದಿಯ ಹಾಜರಾತಿ ಶೇ 100ರಷ್ಟು ಇದೆ. ಹೀಗಾಗಿ ಯಾವುದೇ ತೊಂದರೆಯೂ ಆಗಿಲ್ಲ. ನಮ್ಮ ಕಾಯಂ ಸಿಬ್ಬಂದಿ ಮತ್ತು ಹೊರಗುತ್ತಿಗೆ ಸಿಬ್ಬಂದಿಯೇ ಬಸ್ಗಳನ್ನು ಓಡಿಸಿದ್ದಾರೆ. ಹರಪನಹಳ್ಳಿಯಲ್ಲಿ ಬೆಳಿಗ್ಗೆ 8 ಗಂಟೆಯವರೆಗೆ ಸ್ವಲ್ಪ ಸಮಸ್ಯೆ ಆಗಿದ್ದು ಬಿಟ್ಟರೆ ಬೇರೆ ಎಲ್ಲೂ ಅಂತಹ ಸಮಸ್ಯೆ ಆಗಲಿಲ್ಲ’ ಎಂದು ಕೆಕೆಆರ್ಟಿಸಿ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ (ಡಿ.ಸಿ) ತಿಮ್ಮಾರೆಡ್ಡಿ ಹೀರಾ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರದಲ್ಲಿ ಬೆಳಿಗ್ಗೆ 7ರಿಂದ ಸುಮಾರು ಒಂದು ಗಂಟೆ ಸಾಮಾನ್ಯ ಮಳೆ ಸುರಿದಿತ್ತು. ಆಗ ಬಸ್ಗಳ ಸಂಚಾರ ವಿರಳವಾಗಿತ್ತು. ಬೆಳಿಗ್ಗೆ 8.30ರ ಸುಮಾರಿಗೆ ಮಳೆ ಕಡಿಮೆಯಾದ ಬಳಿಕ ಬಸ್ಗಳ ಓಡಾಟ ಸಹಜವೆಂಬಂತೆ ನಡೆಯಿತು.
ಎಸ್ಪಿ ಭೇಟಿ: ಹುಬ್ಬಳ್ಳಿ ಸಮೀಪ ಹೊಸಪೇಟೆ ಘಟಕಕ್ಕೆ ಸೇರಿದ ಬಸ್ಗೆ ಕಲ್ಲು ತೂರಲಾಗಿದೆ ಎಂಬ ಮಾಹಿತಿ ದೊರೆತ ತಕ್ಷಣ ಇಲ್ಲಿನ ಬಸ್ ನಿಲ್ದಾಣಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಅವರು ಅಗತ್ಯದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು. ಪ್ರಯಾಣಿಕರ ಮತ್ತು ಬಸ್ಗಳ ಸುರಕ್ಷತೆ ದೃಷ್ಟಿಯಿಂದ ಬೆಳಿಗ್ಗೆಯಿಂದಲೇ ತಲಾ ಒಂದೊಂದು ಕೆಎಸ್ಆರ್ಪಿ ತುಕಡಿಗಳನ್ನು ಬಸ್ ನಿಲ್ದಾಣ ಮತ್ತು ಬಸ್ ಡಿಪೋ ಸಮೀಪ ನಿಯೋಜಿಸಲಾಗಿತ್ತು.
ಜಿಲ್ಲೆಯಲ್ಲಿ ಶೇ 97ರಷ್ಟು ಬಸ್ಗಳು ಓಡಾಟ ನಡೆಸಿವೆ. 257 ಬಸ್ಗಳ ಪೈಕಿ 237 ಬಸ್ಗಳು ಸಂಚರಿಸಿವೆ. ಪ್ರಯಾಣಿಕರ ಬಸ್ಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆಅರುಣಾಂಗ್ಷುಗಿರಿ ಎಸ್ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.