ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಲಂಚ, ಕಮಿಷನ್ ಆರೋಪದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ ಹಾಗೂ ಬೋಧಕೇತರ ನೌಕರರ ಸಂಘ ಒಕ್ಕೊರಲ ಹಕ್ಕೊತ್ತಾಯ ಮಾಡಿವೆ.
‘ಬಡ್ತಿಗೆ ಲಂಚ, ಪಿಂಚಣಿಗೆ ಕಮಿಷನ್’, ‘ಶಿಷ್ಯವೇತನಕ್ಕೂ ತೆರಬೇಕು ಹಣ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಈಚೆಗೆ ಪ್ರಕಟಿಸಿದ್ದ ವರದಿ ಹಿನ್ನೆಲೆಯಲ್ಲಿ ಮಂಗಳವಾರ ಬೋಧಕ, ಬೋಧಕೇತರ ಸಿಬ್ಬಂದಿ ವಿಶ್ವವಿದ್ಯಾಲಯದಲ್ಲಿ ಸಭೆ ಸೇರಿ, ಚರ್ಚಿಸಿ ಆಗ್ರಹಿಸಿದರು. ಸಭೆ ಬಳಿಕ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಲಂಚ ಆರೋಪದ ಕುರಿತು ಕುಲಪತಿ ಪ್ರೊ. ಸ.ಚಿ. ರಮೇಶ ಅವರು ಸಿಂಡಿಕೇಟ್ಗೆ ತನಿಖೆಗೆ ಒಪ್ಪಿಸುವುದಾಗಿ ತಿಳಿಸಿದ್ದಾರೆ. ಕುಲಪತಿಯವರ ಈ ಮಾತನ್ನೂ ಒಪ್ಪುವುದಿಲ್ಲ. ಅದನ್ನು ಖಂಡಿಸಲಾಗುವುದು. ಸಿಂಡಿಕೇಟ್ ಸದಸ್ಯರು ಕೂಡ ವಿಶ್ವವಿದ್ಯಾಲಯದ ಭಾಗ. ಕುಲಪತಿ ಅವರು ಪಾರದರ್ಶಕವಾಗಿದ್ದರೆ ನ್ಯಾಯಾಂಗ ತನಿಖೆ ನಡೆಸಬೇಕು. ಇದುವರೆಗಿನ ಹಣಕಾಸಿನ ಲೆಕ್ಕಪತ್ರದ ಕುರಿತು ಶ್ವೇತಪತ್ರ ಹೊರಡಿಸಬೇಕು. ನ. 17ರೊಳಗೆ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ನ. 18ರಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಸಭೆಯಲ್ಲಿ ಎಚ್ಚರಿಕೆ ನೀಡಿದರು.
‘ಕಾಯಂ ಹಾಗೂ ಗುತ್ತಿಗೆ ನೌಕರರ ವೇತನ, ಪಿಂಚಣಿ ಸೌಲಭ್ಯ ಕಾಲಕಾಲಕ್ಕೆ ನೀಡಬೇಕು. ಅರ್ಹರಿಗೆ ಮುಂಬಡ್ತಿ ನೀಡಬೇಕು. ನೌಕರರ ಸೇವಾ ಪೂರ್ವ ಅವಧಿ ಘೋಷಿಸಬೇಕು. ಸಹ ಪ್ರಾಧ್ಯಾಪಕ ಎಂ. ಮಲ್ಲಿಕಾರ್ಜುನಗೌಡ ಅವರ ವರ್ಗಾವಣೆ ಆದೇಶ ರದ್ದುಗೊಳಿಸಬೇಕು. ಮೃತ ನೌಕರರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಬೇಕು. 17 ಬೋಧಕ ಹುದ್ದೆಗಳ ನೇಮಕ ಪ್ರಕ್ರಿಯೆ ಕೈಬಿಡಬೇಕು’ ಎಂದು ಒತ್ತಾಯಿಸಿದರು.
‘ನನ್ನ ಸಂಬಳ ಬಿಡುಗಡೆ ಮಾಡಲು ಕುಲಪತಿಗಳು ಕಮಿಷನ್ ಪಡೆದುಕೊಂಡಿದ್ದಾರೆ’ ಎಂದು ವಿಶ್ವವಿದ್ಯಾಲಯದ ವೈದ್ಯ ಡಾ. ಸಂಪತ್ಕುಮಾರ್ ತೆಗ್ಗಿ ಗಂಭೀರ ಆರೋಪ ಮಾಡಿದರು.
ಗ್ರಂಥಾಲಯದ ಸಹಾಯಕ ಶಂಕರಗೌಡ ಮಾತನಾಡಿ, ‘ಸೇವಾಪೂರ್ವ ಅವಧಿ ಘೋಷಿಸಲು ಎಂಟು ತಿಂಗಳ ವೇತನವನ್ನು ಕೊಡಲು ಬೇಡಿಕೆ ಇಟ್ಟಿದ್ದಾರೆ’ ಎಂದರು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಕ್ಷೇಮಪಾಲನಾ ಘಟಕದ ಸೂಪರಿಟೆಂಡೆಂಟ್ ಕಾಶಿ, ‘ವಿದ್ಯಾರ್ಥಿಗಳ ಶಿಷ್ಯ ವೇತನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.