ಕಂಪ್ಲಿ ತಾಲ್ಲೂಕು ದೇವಸಮುದ್ರ ಕ್ರಾಸ್ ಬಳಿಯ ನರ್ಸರಿಯಲ್ಲಿ ರೈತ ಶಿವನಾಗಪ್ರಸಾದ್(ನಾಣಿ) ಟ್ರೇಗಳನ್ನು ಬಳಸಿ ಭತ್ತದ ಸಸಿ ಬೆಳೆಸಿದ್ದು, ನೀರು ಸಿಂಪರಣೆ ಮಾಡಿ ಆರೈಕೆ ಮಾಡುತ್ತಿರುವ ದೃಶ್ಯ
ಕಂಪ್ಲಿ: ಸಾಂಪ್ರಾದಾಯಿಕ ಭತ್ತ ನಾಟಿ ಕೃಷಿ ಪದ್ಧತಿ ಬದಿಗಿರಿಸಿ ಯಾಂತ್ರಿಕೃತ ಭತ್ತ ಬೇಸಾಯ ಕ್ರಮ ಬಳಕೆಗೆ ತಾಲ್ಲೂಕಿನ ಕೆಲ ರೈತರು ಮುಂದಾಗಿದ್ದಾರೆ.
ಪ್ರಕೃತಿ ವಿಕೋಪ, ಬೆಳೆಗೆ ರೋಗ, ಕೀಟ ಬಾಧೆ, ವೈಜ್ಞಾನಿಕ ಬೆಲೆ ಇಲ್ಲದಿರುವುದು ಹೀಗೆ ಒಂದಿಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಇದಕ್ಕೆಲ್ಲ ಯಾಂತ್ರಿಕೃತ ಭತ್ತ ಬೇಸಾಯ ಪದ್ಧತಿ ಪರಿಹಾರ ಎಂಬುದು ರೈತರ ಅಭಿಪ್ರಾಯ.
ಕೃಷಿಯಲ್ಲಿ ಒಂದಲ್ಲ ಒಂದು ಹೊಸ ಮಾರ್ಗ ಅನುಸರಿಸುವುದು, ಋತುಮಾನಕ್ಕೆ ತಕ್ಕ ಬೆಳೆಗಳನ್ನು ಬೆಳೆಯುವ ತಾಲ್ಲೂಕಿನ ದೇವಸಮುದ್ರ ಗ್ರಾಮದ ಕೃಷ್ಣನಗರಕ್ಯಾಂಪ್ನ ರೈತ ಶಿವನಾಗಪ್ರಸಾದ(ನಾಣಿ) ಹಿಂಗಾರು ಹಂಗಾಮಿಗೆ ಟ್ರೇಗಳನ್ನು ಬಳಸಿ ಆರ್.ಎನ್.ಆರ್ ಮತ್ತು ಗಂಗಾ ಕಾವೇರಿ ಭತ್ತದ ಸಸಿ 25 ಎಕರೆಗೆ ಆಗುವಷ್ಟು ನರ್ಸರಿಯಲ್ಲಿ ಬೆಳೆಸಿದ್ದಾರೆ.
ಟ್ರೇನಲ್ಲಿ ಒಂದು ಇಂಚು ದಪ್ಪ ಗದ್ದೆಯ ಮಣ್ಣನ್ನೇ ತುಂಬಿಸಿ ಉಪಚಾರ ಮಾಡಿದ ಭತ್ತದ ಬೀಜಗಳನ್ನು ತೆಳುವಾಗಿ ಮತ್ತು ಸಮನಾಗಿ ಬಿತ್ತನೆ ಮಾಡಬೇಕು. ಬಳಿಕ ಅದರ ಮೇಲೆ ಜರಡಿ ಮಾಡಿದ ಮಣ್ಣನ್ನು ತೆಳುವಾಗಿ ಹರಡಿ ಅಗತ್ಯವಿರುವಷ್ಟು ನೀರನ್ನು ಸಿಂಪರಣೆ ಮಾಡಬೇಕು.
ಟ್ರೇನಲ್ಲಿ ಒಂದು ಎಕರೆಗಾಗುವಷ್ಟು ಸಸಿ ಬೆಳೆಸುವುದಕ್ಕೆ 12 ಕೆ.ಜಿ ಭತ್ತದ ಬೀಜಕ್ಕೆ ₹ 750 ಭರಿಸಬೇಕಾಗುತ್ತದೆ. 25 ದಿನದ ಬಳಿಕ ₹ 25ರಂತೆ ಒಂದು ಟ್ರೇ ಮಾರಾಟ ಮಾಡಲಾಗುತ್ತದೆ. ಬಳಿಕ ಯಂತ್ರದಿಂದ ನಾಟಿ ಮಾಡಲು ಗಂಟೆಗೆ ₹ 2,000 ವೆಚ್ಚ ಮಾಡಬೇಕಾಗುತ್ತದೆ. ಸಾಂಪ್ರಾದಾಯಿಕ ಭತ್ತದ ಸಸಿ ಬೆಳೆಸಲು ಎಕರೆಗೆ 25 ಕೆ.ಜಿ ಭತ್ತದ ಬೀಜಕ್ಕೆ ₹ 1,500, ನಿರ್ವಹಣೆಗೆ ಕೀಟನಾಶಕ, ರಸಗೊಬ್ಬರ ಸೇರಿ ₹ 1,000, ಎಕರೆ ಭತ್ತ ನಾಟಿಗೆ ₹ 3,500ರಿಂದ ₹ 4,000 ವೆಚ್ಚ ತಗುಲುತ್ತದೆ.
ಕಂಪ್ಲಿಯಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನವರು ತಾಲ್ಲೂಕಿನಾದ್ಯಂತ ‘ಶ್ರೀಪದ್ಧತಿ’ ಹೆಸರಿನಲ್ಲಿ ಯಾಂತ್ರಿಕೃತ ಭತ್ತದ ಬೇಸಾಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಯೋಜನೆಯ ಕೃಷಿ ಅಧಿಕಾರಿ ಎಸ್.ಬಿ. ಸಂಜುಕುಮಾರ್ ಮಾತನಾಡಿ, ಕಳೆದ ಮುಂಗಾರಿನಲ್ಲಿ ಹಾಲಿ ಪದ್ಧತಿಯಲ್ಲಿ 150 ಎಕರೆ ನೆಲ್ಲೂರ ಸೋನಾ ತಳಿ ನಾಟಿಯಾಗಿತ್ತು. ಎಕರೆಗೆ 55 ಚೀಲ ಇಳುವರಿ ಬಂದಿದ್ದು, ರೈತರು 75.ಕೆ.ಜಿ ಭತ್ತದ ಚೀಲ ₹ 1700 ಮಾರಾಟ ಮಾಡಿದ್ದಾರೆ ಎಂದು ತಿಳಿಸಿದರು. ಸಂಪ್ರಾದಾಯ (ನಾಟಿ) ಪದ್ಧತಿಯಲ್ಲಿ ಬೆಳೆದ ಭತ್ತ 40 ರಿಂದ 45 ಚೀಲ ಇಳುವರಿ ಬಂದಿದೆ.
ಈ ಹಿಂಗಾರಿನಲ್ಲಿಯೂ 150ಎಕರೆ ಗುರಿ ಹೊಂದಿದ್ದು, ಅಂದಾಜು 100 ಎಕರೆ ಭತ್ತ ನಾಟಿಯಾಗಿದೆ. ಯೋಜನೆ ವ್ಯಾಪ್ತಿಯಲ್ಲಿರುವ ಸಂಘಗಳಲ್ಲಿ ಪಾಲುದಾರ ಸದಸ್ಯರಾಗಿರುವ ರೈತರು ಪ್ರಸ್ತುತ ಪದ್ಧತಿಯಲ್ಲಿ ಭತ್ತ ನಾಟಿ ಮಾಡಿದ್ದರೆ ಅಂಥವರಿಗೆ ₹ 1,000 ಸಹಾಯಧನ ದೊರೆಯುತ್ತದೆ. ಜೊತೆಗೆ ಟ್ರ್ಯಾಕ್ಟರ್, ಭತ್ತ ನಾಟಿ ಯಂತ್ರ, ಭತ್ತ ಕಟಾವು ಯಂತ್ರ, ಮಡಿಕೆ, ಟಿಲ್ಲರ್ ಇತ್ಯಾದಿ ಕೃಷಿ ಪರಿಕರಗಳು ಬಾಡಿಗೆ ರೂಪದಲ್ಲಿ ಅದು ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತದೆ. ರೈತರಿಗೆ ಸಸಿ ಬೆಳೆಸಲು ಟ್ರೇಗಳನ್ನು ಸಹಾಯಧನ ರೂಪದಲ್ಲಿ ನೀಡುವಂತೆ ಕೃಷಿ ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಹೇಳಿದರು.
ಯಾಂತ್ರಿ ಕೃತ ಭತ್ತ ನಾಟಿ ಯಿಂದ ಸೂರ್ಯ ಕಿರಣಗಳು ನೇರವಾಗಿ ಸಸಿಗಳ ಬುಡಕ್ಕೆ ಬೀಳುವುದರಿಂದ ಗಾಳಿ, ಬೆಳಕು ಹಾದು ಹೋಗಲು ಅವಕಾಶವಿರುತ್ತದೆ. ಕೋನೊ ವೀಡರ್ ಬಳಿಸಿ ಕಳೆ ತೆಗೆಯಬಹುದು. ಬೆಳೆಗೆ ರೋಗ, ಕೀಟ ಬಾಧೆ ತುಂಬಾ ಕಡಿಮೆ. ಇಳುವರಿಯೂ ಅಧಿಕವಾಗಿದ್ದು, ಭವಿಷ್ಯದ ದೃಷ್ಟಿಯಿಂದ ಪ್ರಸ್ತುತ ಪದ್ಧತಿ ಉತ್ತಮ ಎನ್ನುತ್ತಾರೆ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ರಾಘವೇಂದ್ರ ಎಲಿಗಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.