
ಹೊಸಪೇಟೆ (ವಿಜಯನಗರ): ಅಪಘಾತ ಸಂಭವಿಸಿದಾಗ ಕಟ್ಟಡ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯಕ್ಕಾಗಿ ಜಿಲ್ಲೆಯ ಸುಸಜ್ಜಿತ ಆಸ್ಪತ್ರೆಗಳ ಸೇರ್ಪಡೆ ಮಾಡಬೇಕು ಮತ್ತು ಸೆಸ್ ಹಣದಲ್ಲಿ ವಿತರಿಸುವ ಟೂಲ್ಕಿಟ್ ಇತರೆ ಪರಿಕರಗಳನ್ನು ಮಂಡಳಿಯಿಂದ ನೀಡುವ ಸಮಯದಲ್ಲಿ ಜನಪ್ರತಿನಿಧಿಗಳ ಹಸ್ತಕ್ಷೇಪ ವಿರೋಧಿಸಿ ಕಟ್ಟಡ ಕಾರ್ಮಿಕರು ಸೋಮವಾರ ಇಲ್ಲಿ ಪ್ರತಿಭಟನ ನಡೆಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಯಲ್ಲಾಲಿಂಗ ಮುಂದಾಳತ್ವದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಬಳಿ ಈ ಪ್ರತಿಭಟನೆ ನಡೆಯಿತು.
ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸ್ಕಾಲರ್ಷಿಪ್ ಅನ್ನು ಮನಸೋ ಇಚ್ಚೆಯಂತೆ ಬಿಡುಗಡೆ ಮಾಡುತ್ತಿರುವುದು ಸರಿಯಲ್ಲ, ಅಪಘಾತದಿಂದ ಗಾಯಗೊಂಡ ಸಂದರ್ಭದಲ್ಲಿ ಸುಸಜ್ಜಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ನೀಡಬೇಕು ಎಂದು ಯಲ್ಲಾಲಿಂಗ ಒತ್ತಾಯಿಸಿದರು.
ಬೇಡಿಕೆಗಳು: 2021-22 ರಿಂದ 2025-26ನೇ ಸಾಲಿನವರೆಗೆ ಮಂಡಳಿಯು ನೀಡಿರುವ ಶೈಕ್ಷಣಿಕ ಸಹಾಯಧನದ ತಾಲ್ಲೂಕುವಾರು ಪಟ್ಟಿ ನೀಡಬೇಕು, ಟೂಲ್ಕಿಟ್ಗಳ ವಿತರಣೆಯಲ್ಲಿ ಶಾಸಕರ ಹಸ್ತಕ್ಷೇಪ ಸಲ್ಲದು, ಮದುವೆ ಸಹಾಯಧನ, ಪಿಂಚಣಿ, ಮರಣ ಪರಿಹಾರ, ಹೆರಿಗೆ ಭತ್ಯೆ, ಇವುಗಳ ಅರ್ಜಿಗಳನ್ನು ಪರಿಶೀಲನೆಯ ಹೆಸರಿನಲ್ಲಿ ವಿಳಂಬ ಮಾಡದೆ ತ್ವರಿತವಾಗಿ ಆದೇಶ ನೀಡಬೇಕು ಸಹಿತ ಹಲವು ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರಪ್ಪ ಡೊಂಬರಮತ್ತೂರ ಅವರಿಗೆ ಸಲ್ಲಿಸಲಾಯಿತು.
ಕಾರ್ಮಿಕ ಮುಖಂಡರಾದ ಜಿ.ಗುನ್ನಳ್ಳಿ ರಾಘವೇಂದ್ರ, ಎಂ.ಗೋಪಾಲ, ನನ್ನು ಸಾಬ್, ಹೇಮಂತ್ ನಾಯ್ಕ್, ವಿ.ಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.