ಹರಪನಹಳ್ಳಿ: ಮುಂಗಾರು ಹಂಗಾಮು ಆರಂಭಕ್ಕೂ ಮುಂಚೆ ತಾಲ್ಲೂಕಿನಲ್ಲಿ 1.29 ಲಕ್ಷ ಸಸಿಗಳ ವಿತರಣೆಗೆ ವಲಯ ಅರಣ್ಯ ಇಲಾಖೆ ಸಜ್ಜಾಗಿದೆ. ಜೂನ್ 5ರಿಂದ ರೈತರು, ಸಂಘ ಸಂಸ್ಥೆಗಳಿಗೆ ವಿತರಣೆ ಆರಂಭಗೊಳ್ಳಲಿದೆ. ಈಗಾಗಲೇ ಶಾಲೆಗಳಿಗೆ ಸಸಿಗಳ ವಿತರಣೆ ಆರಂಭಿಸಲಾಗಿದೆ.
ಈ ಬಾರಿ ತೋಟಗಾರಿಕೆ, ಹಣ್ಣು, ಕೃಷಿ ಮತ್ತು ಅರಣ್ಯ, ವಾಣಿಜ್ಯ ಅರಣ್ಯ ಸೇರಿದಂತೆ 60ಕ್ಕೂ ಅಧಿಕ ತಳಿಗಳ ಸಸಿ ಮಾರಾಟಕ್ಕೆ ಲಭ್ಯವಿವೆ. ಕಣಿವಿಹಳ್ಳಿ ಸಸ್ಯ ಕ್ಷೇತ್ರದಲ್ಲಿ 2 ಸಾವಿರ ಮಹಾಗನಿ, 40 ಸಾವಿರ ತೇಗ, 15 ಸಾವಿರ ನೇರಳೆ, 3,500 ಶ್ರೀಗಂಧ, 9 ಸಾವಿರ ನುಗ್ಗೆ, 5 ಸಾವಿರ ನೆಲ್ಲಿ, 25 ಸಾವಿರ ಸಿಲ್ವರ್ ಸೇರಿದಂತೆ ಸಾರ್ವಜನಿಕರಿಗಾಗಿ ವಿತರಿಸಲು 56 ಸಾವಿರ ಸಸಿಗಳು, ಅರಣ್ಯ ಕೃಷಿಗೆ 73,250 ಸಸಿಗಳನ್ನು ಬೆಳೆಸಲಾಗಿದೆ.
ಶಾಲೆಯ ಮುಖ್ಯಸ್ಥರಿಂದ ಪತ್ರ ಪಡೆದು ಜೂನ್ 1ರಿಂದ ಸಸಿಗಳ ವಿತರಣೆ ಕಾರ್ಯ ಆರಂಭವಾಗಿದೆ. ಜೂನ್ 5ರಿಂದ ಸಾರ್ವಜನಿಕರಿಗೆ ಮಾರಾಟಕ್ಕೆ ಲಭ್ಯ ಇವೆ.
‘6x9 ಇಂಚು ಅಳತೆಯ ತಲಾ ಒಂದು ಸಸಿಗೆ ₹6, 8x12 ಇಂಚು ಅಳತೆಯ ತಲಾ ಒಂದು ಗಿಡಕ್ಕೆ ₹23 ಪಾವತಿಸಿ ಖರೀದಿಸಬೇಕು’ ಎಂದು ವಲಯ ಅರಣ್ಯಾಧಿಕಾರಿ ಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಈ ವರ್ಷ ಕೆಲ ಸಸಿಗಳು ಆರು ಪಟ್ಟು, ಕೆಲವು ಸಸಿಗಳಿಗೆ ಇಪ್ಪತ್ತು ಪಟ್ಟು ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ ರೈತರಿಗೆ ಆರ್ಥಿಕ ಹೊರೆ ಆಗುತ್ತಿದೆ. ಮೊದಲಿದ್ದಂತೆಯೇ 6x9 ಅಳತೆಯ ಸಸಿಗಳಿಗೆ ₹1, 8x12 ಅಳತೆಯ ಗಿಡಗಳಿಗೆ ₹3 ದರ ನಿಗದಿ ಮಾಡಬೇಕು’ ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಗುಡಿಹಳ್ಳಿ ಹಾಲೇಶ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.