ADVERTISEMENT

‘ಜನರ ಆರೋಗ್ಯ ರಕ್ಷಣೆಯಲ್ಲಿ ಸರ್ಕಾರ ವಿಫಲ’

​ಪ್ರಜಾವಾಣಿ ವಾರ್ತೆ
Published 20 ಮೇ 2021, 14:26 IST
Last Updated 20 ಮೇ 2021, 14:26 IST

ಹೊಸಪೇಟೆ(ವಿಜಯನಗರ): ‘ರಾಜ್ಯ ಸರ್ಕಾರ ಪ್ರಕಟಿಸಿರುವ ₹1,250 ಕೋಟಿ ವಿಶೇಷ ಪ್ಯಾಕೇಜ್ ರಾಜ್ಯದ ಬಡವರೆಲ್ಲರಿಗೂ ತಲುಪದ ಅರೆಬರೆ ಪ್ಯಾಕೇಜ್ ಆಗಿದೆ. ಕೋವಿಡ್ ಸಂಕಷ್ಟದ ವೇಳೆ ಜನತೆಯ ಜೀವನ ರಕ್ಷಿಸುವ ಬದ್ಧತೆಯಿಲ್ಲದಿರುವುದು ಇದರಿಂದ ಸಾಬೀತಾಗಿದೆ. ಇದು ಸರ್ಕಾರದ ವೈಫಲ್ಯ ತೋರಿಸುತ್ತದೆ’ ಎಂದು ಡಿವೈಎಫ್ಐ ತಾಲ್ಲೂಕು ಅಧ್ಯಕ್ಷ ಈಡಿಗರ ಮಂಜುನಾಥ ಆರೋಪಿಸಿದ್ದಾರೆ.

‘ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಲ್ಲಿ ಬಡವರು, ರೈತರು ಹಾಗೂ ಕೂಲಿಕಾರ ವರ್ಗಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಈ ಪ್ಯಾಕೇಜ್ ಜನರ ರಕ್ಷಣೆಯ ನೈಜ ಕಾಳಜಿ ಒಳಗೊಂಡಿಲ್ಲ. ಈಗಾಗಲೇ ಉದ್ಯೋಗ ಕಳೆದುಕೊಂಡು ಜೀವನ ಕಟ್ಟಿಕೊಳ್ಳಲು ಪರದಾಡುತ್ತಿರುವ ಯುವಜನರಿಗಂತೂ ಈ ಪ್ಯಾಕೇಜ್ ನಿಂದ ನಯಾಪೈಸೆ ಲಾಭವಿಲ್ಲ’ ಎಂದು ಗುರುವಾರ ಪ್ರಕಟಣೆಯಲ್ಲಿ ದೂರಿದ್ದಾರೆ.

‘ಎಲ್ಲ ಬಡ ಕೂಲಿಕಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಕೆಲಸವನ್ನು ₹600 ಕೂಲಿಯೊಂದಿಗೆ 200 ದಿನಗಳಿಗೆ ಹೆಚ್ಚಿಸಿ ನಗರ ಪ್ರದೇಶಕ್ಕೂ ವಿಸ್ತರಿಸಬೇಕಿತ್ತು. ಆದರೆ, ಆ ಕೆಲಸ ಆಗಿಲ್ಲ. ಎರಡನೇ ಅಲೆಯಲ್ಲಿ ಸಾವು, ನೋವು ಹೆಚ್ಚಾಗಿವೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಪ್ಯಾಕೇಜ್‌ ಘೋಷಿಸಬೇಕಿತ್ತು’ ಎಂದು ಹೇಳಿದ್ದಾರೆ.

ADVERTISEMENT

‘ಜನತೆ ಎದುರಿಸುತ್ತಿರುವ ಈ ಅಪಾಯಕರ ಸನ್ನಿವೇಶದಲ್ಲಿ ಜನರನ್ನು ರಕ್ಷಿಸಬೇಕಾದ ನೈಜ ಕಾಳಜಿ ಹಾಗೂ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ, ಎಲ್ಲರಿಗೂ ಆರೋಗ್ಯ ಖಾತ್ರಿ ಪಡಿಸಿ, ಆಹಾರ ಭದ್ರತೆಗೆ ಒತ್ತು ನೀಡಬೇಕಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.