ಹೂವಿನಹಡಗಲಿ: ತಾಲ್ಲೂಕಿನ ಹಿರೇಹಡಗಲಿಯಲ್ಲಿ ಗುರುವಾರ ರಾತ್ರಿ ಹಾಲಸ್ವಾಮಿ ಮುಳ್ಳು ಗದ್ದುಗೆ ಉತ್ಸವ ಸಡಗರ, ಸಂಭ್ರಮದಿಂದ ಜರುಗಿತು.
ಹಾಲಸ್ವಾಮಿ ಮಠದ ಸಂಪ್ರದಾಯದಂತೆ ಅಮೃತೇಶ್ವರ ಹಾಲಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿ ರಾತ್ರಿ 11.30ಕ್ಕೆ ಮುಳ್ಳು ಗದ್ದುಗೆಯ ಮಂಟಪವನ್ನು ಆರೋಹಣ ಮಾಡಿದರು. ಸದ್ಗುರು ಶಿವಯೋಗಿ ಸಣ್ಣ ಹಾಲಸ್ವಾಮೀಜಿ, ಹಾಲಸೋಮೇಶ್ವರ ಸ್ವಾಮೀಜಿ, ಹಾಲ ಸಿದ್ದೇಶ್ವರ ಸ್ವಾಮೀಜಿ, ಹಾಲ ವೀರಭದ್ರಪ್ಪಜ್ಜ ಸ್ವಾಮೀಜಿ ಸೇರಿದಂತೆ ಮಠದ ಎಲ್ಲ ಸ್ವಾಮೀಜಿಗಳು ನೇತೃತ್ವ ವಹಿಸಿದ್ದರು.
ಇದಕ್ಕೂ ಮುನ್ನ ಮಠದ ಸೇವಾರ್ಥಿಗಳು ಮುಳ್ಳನ್ನು ತಂದು, ಮುಳ್ಳಿನ ಗದ್ದುಗೆ ಅಣಿಗೊಳಿಸಿದರು. ಹಾಲಸ್ವಾಮಿ ಮಠದ ದೇವತೆಯ ಪ್ರತೀಕವಾಗಿರುವ ತೇಜಮ್ಮ (ಕುದುರೆ) ನೊಂದಿಗೆ ಸಮೀಪದ ಮಾನಿಹಳ್ಳಿಗೆ ತೆರಳಿ ಬನ್ನಿಮಹಾಂಕಾಳಿಗೆ ಪೂಜೆ ನೆರವೇರಿಸಿದ ನಂತರ ಮಠದ ಪಕ್ಕದಲ್ಲಿರುವ ಪೂರ್ವಜರ ಗದ್ದುಗೆ ಬಳಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಜಾತ್ಯತೀತ ಪರಂಪರೆಯನ್ನು ಸಾರುವ ಶ್ರೀ ಮಠದ ಸಮನ್ವಯ ಜಾತ್ರೆಯಲ್ಲಿ ನಾನಾ ಭಾಗಗಳಿಂದ ಅಪಾರ ಭಕ್ತರು ಭಾಗವಹಿಸಿ ಹಾಲಸ್ವಾಮೀಜಿ ಗದ್ದುಗೆಯ ದರ್ಶನ ಪಡೆದರು.
ಹಾಲಸ್ವಾಮಿ ರಥೋತ್ಸವ: ಹಿರೇಹಡಗಲಿಯಲ್ಲಿ ಶುಕ್ರವಾರ ಸಂಜೆ ಹಾಲಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಸರ್ವಾಲಂಕೃತ ರಥಕ್ಕೆ ಪೂಜೆ ನೆರವೇರಿಸುತ್ತಿದ್ದಂತೆ ಭಕ್ತರ ಜಯಘೋಷದ ನಡುವೆ ರಥೋತ್ಸವ ಚಾಲನೆ ಪಡೆದುಕೊಂಡಿತು. ಗ್ರಾಮದ ಮುಖ್ಯಬೀದಿಯಲ್ಲಿ ಸಾಗಿದ ರಥಕ್ಕೆ ಭಕ್ತರು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಅಪಾರ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.