ಹೊಸಪೇಟೆ (ವಿಜಯನಗರ): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೋಮವಾರ ವಿಶ್ವಪ್ರಸಿದ್ಧ ಹಂಪಿಗೆ ಭೇಟಿ ನೀಡಿದರು.
ಪತ್ನಿ ಮಲ್ಲಿಕಾ ಹಾಗೂ ಮಕ್ಕಳು ಜೊತೆಗಿದ್ದರು. ಹಂಪಿ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಬಳಿಕ ಸಾಸಿವೆಕಾಳು, ಕಡಲೆಕಾಳು, ಕಮಲ ಮಹಲ್, ಗಜಶಾಲೆ ಹಾಗೂ ವಿಜಯ ವಿಠಲ ದೇವಸ್ಥಾನಕ್ಕೆ ಭೇಟಿ ಕೊಟ್ಟು ಸ್ಮಾರಕಗಳನ್ನು ಕಣ್ತುಂಬಿಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಡ್ಡಾ, ಐತಿಹಾಸಿಕ ಹಂಪಿಗೆ ಬಂದಿರುವುದು ನನ್ನ ಸೌಭಾಗ್ಯ. ಇಲ್ಲಿಗೆ ಭೇಟಿ ನೀಡಿದ ನಂತರ ವಿಜಯನಗರ ಸಾಮ್ರಾಜ್ಯದ ಕಾಲದ ವ್ಯವಸ್ಥೆ, ಜ್ಞಾನ, ವಿಜ್ಞಾನ, ವಾಸ್ತುಶಿಲ್ಪದ ಬಗ್ಗೆ ತಿಳಿದುಕೊಳ್ಳಲು ಸಹಾಯವಾಯಿತು. ಹಂಪಿ ನಮ್ಮ ಶ್ರೇಷ್ಠ ಗೌರವದ ಇತಿಹಾಸದ ಪ್ರತಿಬಿಂಬ ಎಂದರು.
ಅನೇಕ ವೈಶಿಷ್ಟ್ಯತೆಯ ಸಂಗಮ ಹೊಂದಿರುವ ಹಂಪಿಯನ್ನು ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿರುವುದು ಸರಿಯಾದ ಕ್ರಮ. ಐತಿಹಾಸಿ, ಧಾರ್ಮಿಕ ದೃಷ್ಟಿಯಿಂದ ಈ ಸ್ಥಳ ಪ್ರಮುಖವಾದುದು. ನಮ್ಮ ಜನ, ಋಷಿ ಮುನಿಗಳು ಎಷ್ಟು ಸಜ್ಜನರಾಗಿದ್ದರು. ಪ್ರಕೃತಿ ಜೊತೆಗೆ ನಮ್ಮ ಸಂಬಂಧ ಹೇಗಿರಬೇಕು ಎನ್ನುವುದು ಇಲ್ಲಿನ ವಾಸ್ತುಶಿಲ್ಪದಿಂದ ಗೊತ್ತಾಗುತ್ತದೆ. ಅವಕಾಶ ಸಿಕ್ಕಾಗಲೆಲ್ಲಾ ನಮ್ಮ ಐತಿಹಾಸಿಕ, ಗೌರವದ ಸಂಕೇತವಾಗಿರುವ ಸ್ಥಳಗಳಿಗೆ ಹೋಗಬೇಕು ಎಂದು ಪ್ರಧಾನಿ ಮೋದಿಯವರು ಹೇಳುತ್ತಿರುತ್ತಾರೆ. ವಿಜಯನಗರ ಶ್ರೀಮಂತ, ಅಭಿವೃದ್ಧಿಯ ಸಾಮ್ರಾಜ್ಯವಾಗಿತ್ತು. ಆ ಅಭಿವೃದ್ಧಿಯ ಕಡೆಗೆ ಈ ದೇಶವನ್ನು ಕೊಂಡೊಯ್ಯುವುದು ನಮ್ಮ ಗುರಿ ಕೂಡ ಹೌದು’ ಎಂದು ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಜೊತೆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.