ADVERTISEMENT

ಸರ್ಕಾರ ಏನು ಮಾಡುತ್ತದೆ ಗೊತ್ತಿಲ್ಲ: ಹಂಪಿ ಕನ್ನಡ ವಿವಿ ಕುಲಪತಿ ರಮೇಶ ಹೇಳಿಕೆ

ಕಾಮಗಾರಿ, ಖರೀದಿಯಲ್ಲಿ ಲಂಚದ ಆರೋಪ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 14:35 IST
Last Updated 28 ಅಕ್ಟೋಬರ್ 2022, 14:35 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ   

ಹೊಸಪೇಟೆ (ವಿಜಯನಗರ): ‘2015ರಿಂದ 2021ರ ವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ಕುರಿತಂತೆ ಸರ್ಕಾರ ಏನು ಮಾಡುತ್ತದೆ ಗೊತ್ತಿಲ್ಲ’ ಎಂದು ವಿ.ವಿ. ಕುಲಪತಿ ಪ್ರೊ.ಸ.ಚಿ. ರಮೇಶ ತಿಳಿಸಿದರು.

ಶುಕ್ರವಾರ ವಿ.ವಿ.ಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು, ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವಧಿಯಿಂದ ನಿಮ್ಮ ಅವಧಿವರೆಗಿನ ಎಲ್ಲ ಕಾಮಗಾರಿ, ಖರೀದಿ, ಲಂಚದ ಬಗ್ಗೆ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಲು ಸಿಂಡಿಕೇಟ್‌ನಲ್ಲಿ ತೀರ್ಮಾನ ಕೈಗೊಂಡು ವರ್ಷ ಕಳೆದಿದ್ದು, ತನಿಖೆ ಯಾವ ಹಂತದಲ್ಲಿದೆ? ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಈ ವಿಚಾರವಾಗಿ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರ ಏನು ಮಾಡುತ್ತದೆ ಗೊತ್ತಿಲ್ಲ. ಬೋಧಕ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿ ಸರ್ಕಾರದಿಂದ ಅನುಮತಿ ಕೇಳಲಾಗಿದೆ. ಮೀಸಲಾತಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಬಿಂದುಗಳನ್ನು ಗುರುತಿಸಿ ಕೊಟ್ಟಿದೆ. ರಾಜ್ಯಪಾಲರ ಒಪ್ಪಿಗೆ ಬೇಕಾಗುತ್ತದೆ. ಹೊಸ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಬಂದ ನಂತರ ಮುಂದುವರೆಯಲಾಗುವುದು ಎಂದು ತಿಳಿಸಿದರು.

ADVERTISEMENT

ಕನ್ನಡ ವಿಶ್ವವಿದ್ಯಾಲಯಕ್ಕೆ ಭೂಮಿ ಕೊಟ್ಟವರಿಗೆ ವಿ.ವಿ.ಯಲ್ಲಿ ಕಾಯಂ ನೌಕರಿ ಕೊಡುವ ವಿಚಾರದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ 170 ತಾತ್ಕಾಲಿಕ ನೌಕರರ ಸಂಬಳ ಬಿಡುಗಡೆಗೊಂಡಿಲ್ಲ. ಮುಖ್ಯಮಂತ್ರಿಯವರು ವಿ.ವಿಗೆ ಬಂದಾಗ ₹25 ಕೋಟಿ ವಿಶೇಷ ಅನುದಾನ ನೀಡಲಾಗುವುದು ಎಂದು ಹೇಳಿದ್ದರು. ಈಗಾಗಲೇ ₹7 ಕೋಟಿ ಬಿಡುಗಡೆಗೊಳಿಸಲಾಗಿದೆ. ಮಿಕ್ಕುಳಿದ ಹಣ ಹಂತ ಹಂತವಾಗಿ ಬರಲಿದೆ ಎಂದು ಹೇಳಿದರು.

ಪಂಡಿತ್‌ ದೀನದಯಾಳ್‌ ಅಧ್ಯಯನ ಕೇಂದ್ರ ಆರಂಭಿಸಲು ಸಿಂಡಿಕೇಟ್‌ ಸಭೆ ಒಪ್ಪಿಗೆ ನೀಡಿದೆ. ಶನಿವಾರ (ಅ.29) ಮಧ್ಯಾಹ್ನ 3.30ಕ್ಕೆ ಕೇಂದ್ರ ವಿದೇಶಾಂಗ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಉದ್ಘಾಟಿಸುವರು ಎಂದು ತಿಳಿಸಿದರು.
ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.