ಹೊಸಪೇಟೆ (ವಿಜಯನಗರ): ರಸ್ತೆ ನಿರ್ಮಾಣಕ್ಕೆ ಮಣ್ಣು ಕೊಂಡೊಯ್ಯಲು ನೆಲ ಅಗೆಯುತ್ತಿರುವುದರಿಂದ ತಾಲ್ಲೂಕಿನ ಹಂಪಿ ತಳವಾರ ಘಟ್ಟದ ಶಿವ ದೇವಾಲಯ ಸಮೀಪದ ಪುರಾತನ ಕಲ್ಲಿನ ಕೋಟೆ ಗೋಡೆಗೆ ಶನಿವಾರ ಹಾನಿಯಾಗಿದೆ.
ಈ ಪ್ರದೇಶವು ಹಂಪಿಯ ಕೋರ್ ಜೋನ್ ವ್ಯಾಪ್ತಿಗೆ ಬರುತ್ತದೆ. ಆದರೆ, ಹಿಟಾಚಿಯಿಂದ ಮಣ್ಣು ತೆಗೆಯಲಾಗುತ್ತಿದ್ದು, ಕೋಟೆ ಗೋಡೆ ಬಿದ್ದಿದೆ. ನಾಲ್ಕೈದು ಟಿಪ್ಪರ್ಗಳಲ್ಲಿ ಮಣ್ಣು ಸಾಗಿಸಲಾಗುತ್ತಿದೆ. ನೆಲ ಅಗೆದ ಜಾಗದಲ್ಲಿ 25 ಮೀಟರ್ ದೂರದಲ್ಲಿ ಶಿವ ದೇವಾಲಯವಿದ್ದು, ಅದಕ್ಕೂ ಧಕ್ಕೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ... ಕಂಬಳ: 8.96 ಸೆಕೆಂಡ್ನಲ್ಲಿ 100 ಮೀಟರ್ ಕ್ರಮಿಸಿ ದಾಖಲೆ ಬರೆದ ಶ್ರೀನಿವಾಸ ಗೌಡ
‘ಇದೇ ರೀತಿಯ ಕಾಮಗಾರಿಯಿಂದ ವಾರದ ಹಿಂದೆಯಷ್ಟೇ ಕಮಲ ಮಹಲ್ ಸ್ಮಾರಕದ ಬಳಿ ಕೋಟೆ ಗೋಡೆ ಕುಸಿದು ಬಿದ್ದಿತ್ತು. ಆದರೆ, ಅದರಿಂದ ಪಾಠ ಕಲಿತಂತಿಲ್ಲ. ಶಿವ ದೇವಾಲಯಕ್ಕೆ ಹೊಂದಿಕೊಂಡಂತೆ ಕೋಟೆ ಗೋಡೆ, ಬೃಹತ್ ಬಂಡೆಗಲ್ಲುಗಳಿವೆ. ಬೇಕಾಬಿಟ್ಟಿ ಮಣ್ಣು ತೆಗೆದು ಕೊಂಡೊಯ್ಯುತ್ತಿರುವುದರಿಂದ ಕೋಟೆ ಗೋಡೆಗೆ ಹಾನಿಯಾಗಿದೆ. ಕಲ್ಲುಗಳು ಉರುಳಿ ಬೀಳುವ ಸಾಧ್ಯತೆ ಇದ್ದು, ಶಿವ ದೇವಾಲಯಕ್ಕೆ ಹಾನಿ ಆಗಬಹುದು. ಪುರಾತತ್ವ ಇಲಾಖೆಯವರು ಕೂಡಲೇ ಕೆಲಸ ನಿಲ್ಲಿಸಬೇಕು’ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಆಗ್ರಹಿಸಿದ್ದಾರೆ.
ಈ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ರಸ್ತೆ ನಿರ್ಮಾಣಕ್ಕೆ ಮಣ್ಣು ಕೊಂಡೊಯ್ಯುತ್ತಿದ್ದಾರೆ. ಅದರಿಂದ ಯಾವುದೇ ಸ್ಮಾರಕಕ್ಕೆ ಧಕ್ಕೆ ಉಂಟಾಗುವುದಿಲ್ಲ. ಕೋಟೆ ಗೋಡೆಗೆ ಏನೂ ಆಗಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.