ADVERTISEMENT

ವಿಜಯನಗರ: ಕುಂಚ ತಂದಿತು ಕೊಂಚ ನೆಮ್ಮದಿ

ಆರ್ಥಿಕ ಸಂಕಷ್ಟದ ವಿಶ್ವವಿದ್ಯಾಲಯದಲ್ಲಿ ಹೀಗೊಂದು ‘ಅರ್ಥ‘ಪೂರ್ಣ ನಗೆ

ಎಂ.ಜಿ.ಬಾಲಕೃಷ್ಣ
Published 13 ಆಗಸ್ಟ್ 2023, 5:49 IST
Last Updated 13 ಆಗಸ್ಟ್ 2023, 5:49 IST
ತಾವೇ ರಚಿಸಿದ ಪೇಂಟಿಂಗ್‌ಗಳನ್ನು ಕಲಾ ಗ್ಯಾಲರಿಯಲ್ಲಿ ತೂಗುಹಾಕಿ, ಗ್ರಾಹಕರಿಗೆ ಹೇಗೆ ಕಂಡೀತು ಎಂದು ನೋಡುತ್ತಿರುವ ಹಂಪಿ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು
ತಾವೇ ರಚಿಸಿದ ಪೇಂಟಿಂಗ್‌ಗಳನ್ನು ಕಲಾ ಗ್ಯಾಲರಿಯಲ್ಲಿ ತೂಗುಹಾಕಿ, ಗ್ರಾಹಕರಿಗೆ ಹೇಗೆ ಕಂಡೀತು ಎಂದು ನೋಡುತ್ತಿರುವ ಹಂಪಿ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು   

ಹೊಸಪೇಟೆ (ವಿಜಯನಗರ): ಆರ್ಥಿಕ ಸಂಕಷ್ಟದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಪೇಚಿನ ಮುಖಭಾವದಲ್ಲಿದ್ದರೆ, ಇಲ್ಲಿನ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು ತಮ್ಮ ಕುಂಚದಿದಲೇ ಕೊಂಚ ಸಂಪಾದನೆ ಮಾಡಿ ‘ಅರ್ಥ’ಪೂರ್ಣ ನಗೆ ಬೀರಿದ್ದಾರೆ.

ವಿಶ್ವ ಪಾರಂಪರಿಕ ತಾಣ ಹಂಪಿಯನ್ನು ನೋಡಲು ಬಂದ ಪ್ರವಾಸಿಗರು ಹಂಪಿ ಮೃಗಾಲಯದತ್ತ, ಆರೆಂಜ್ ಕೌಂಟಿಯತ್ತ, ನೇಚರ್‌ ಕ್ಯಾಂಪ್‌ನತ್ತ, ಜಂಗಲ್‌ ಲಾಡ್ಜ್‌ನತ್ತ ತೆರಳುವಾಗ ಕಮಲಾಪುರ ಮುಖ್ಯ ರಸ್ತೆಯಲ್ಲೇ ಸಂಚರಿಸಬೇಕು. ಈ ರಸ್ತೆಯ ಪಕ್ಕದಲ್ಲೇ ಇದೆ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗ. ಇದು ವಿದ್ಯಾರ್ಥಿಗಳ ಕಲಿಕೆಯ ಜತೆಗೆ ಗಳಿಕೆಗೆ ನೆರವಾಗಿರುವ ಪ್ರಮುಖ ಅಂಶ.

ಹಂಪಿ ಎಂದರೆ ಕಲ್ಲು, ಹೀಗಾಗಿ ಹಂಪಿಯಲ್ಲಿರುವ ದೃಶ್ಯಕಲಾ ವಿಭಾಗವೂ ಎದುರಿನಲ್ಲೇ ಇಟ್ಟಂತಹ ಕಲ್ಲಿನ ಕಲಾಕೃತಿಗಳಿಂದ ಜನರನ್ನು ಸೆಳೆಯುತ್ತಿದೆ. ಸಹಜ ಕುತೂಹಲದಿಂದ ವಿಭಾಗದೊಳಗೆ ತೆರಳಿದಾಗ ಪ್ರಸಿದ್ಧ ಕಲಾವಿದರ ಕಲಾಕೃತಿಗಳ ಪ್ರದರ್ಶನ ಮನಸೂರೆಗೊಳ್ಳುತ್ತದೆ. ಇದು ಪ್ರದರ್ಶನಕ್ಕೆ ಮಾತ್ರ. ಪಕ್ಕದ ಬಣ್ಣದ ಕೊಠಡಿಗಳಿಗೆ ತೆರಳಿದಾಗ ವಿದ್ಯಾರ್ಥಿಗಳು ಮಾಡುತ್ತಿರುವ ಪೇಂಟಿಂಗ್‌ಗಳು ಕಣ್ಣು ಕೋರೈಸುತ್ತವೆ. ಅಲ್ಲೇ ದರ ಕುದುರುತ್ತದೆ. ₹100, ₹ 500, ₹ 1,000, ₹5,000 ಹೀಗೆ ಸಾಕಷ್ಟು ಕಲಾಕೃತಿಗಳು ಮಾರಾಟವಾಗುತ್ತವೆ. ಈ ವರ್ಷ ವಿದ್ಯಾರ್ಥಿಗಳು ಏನಿಲ್ಲವೆಂದರೂ ತಿಂಗಳಿಗೆ ₹ 5 ಸಾವಿರದಿಂದ ₹ 8 ಸಾವಿರದವರೆಗೆ ಗಳಿಸಿದ್ದಾರೆ.

ADVERTISEMENT

ಕಳೆದ ತಿಂಗಳು ನಡೆದ ಜಿ20 ಸಭೆಗೆ ಮೊದಲು ಕಮಲಾಪುರ, ಹಂಪಿ ಭಾಗದಲ್ಲಿ ಹಾಗೂ ಹೊಸಪೇಟೆ ನಗರದ ತುಂಬೆಲ್ಲ ಕಲಾಕೃತಿಗಳು ಗೋಡೆಗಳಲ್ಲಿ ರಾರಾಜಿಸಿದ್ದವು. ಇಲ್ಲಿನ ವಿದ್ಯಾರ್ಥಿಗಳ ಕುಂಚಗಳೂ ಬಣ್ಣ ಹಚ್ಚಿ ದುಡ್ಡು ಬಾಚಿವೆ.

‘ಇಲ್ಲಿನ ದೃಶ್ಯಕಲಾ ವಿಭಾಗದಲ್ಲಿ 20 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ರಾಜ್ಯದ ವಿವಿಧ ಭಾಗಗಳಿಂದ, ಡಾರ್ಜಿಲಿಂಗ್‌, ಕೋಲ್ಕತ್ತ, ತೆಲಂಗಾಣ, ಆಂಧ್ರದಿಂದ ಬಂದವರು. ಹಲವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಇಲ್ಲಿ ಆಗುತ್ತಿರುವ ಗಳಿಕೆಯಿಂದಾಗಿ ಅವರು ಮನೆಯನ್ನು ಅವಲಂಬಿಸುವುದು ಕಡಿಮೆಯಾಗಿದೆ. ಇಲ್ಲಿ ವ್ಯಾಸಂಗ ಮುಗಿಸಿ ಹೋದ ಶೇ 80ಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಉತ್ತಮ ಸಂಬಳದ ಕೆಲಸ ಸಿಕ್ಕಿದೆ’ ಎನ್ನುತ್ತಾರೆ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಪ್ರೊ.ಮೋಹನರಾವ್‌ ಬಿ.ಪಂಚಾಳ್‌.

ಸದ್ಯ ಹಂಪಿ ವಿಶ್ವವಿದ್ಯಾಲಯಕ್ಕೆ ರಾಜ್ಯದ 57 ಕಲಾ ಶಾಲೆಗಳು ಸಂಯೋಜನೆಗೊಂಡಿವೆ. ವಿಶೇಷವೆಂದರೆ ರಾಜ್ಯದಲ್ಲಿ ಯುಜಿಸಿ ಮಾನ್ಯತೆ ಪಡೆದ ದೃಶ್ಯಕಲಾ ಪ್ರೊಫೆಸರ್‌ಗಳ ಸಂಖ್ಯೆ ಕೇವಲ ಮೂರು. ಒಬ್ಬರು ಪಂಚಾಳ್, ಇನ್ನಿಬ್ಬರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿದ್ದಾರೆ. ಕಲೆಗೆ ಇರುವ ಉತ್ತೇಜನದ ಕೊರತೆಯ ಕತೆಯನ್ನು ಇದು ಹೇಳುತ್ತಿದೆ.

ಜನಪದ ಸಾಂಪ್ರದಾಯಿಕ ಮತ್ತು ಆಧುನಿಕ ಚಿತ್ರಕಲೆಯೊಂದಿಗೆ ಸಂಶೋಧನೆಗೆ ಅವಕಾಶ ನೀಡುತ್ತಿರುವ ರಾಜ್ಯದ ಏಕೈಕ ವಿಶ್ವವಿದ್ಯಾಲಯ ಇದು.
-ಪ್ರೊ.ಮೋಹನರಾವ್‌ ಬಿ.ಪಂಚಾಳ್‌ ಮುಖ್ಯಸ್ಥ ದೃಶ್ಯಕಲಾ ವಿಭಾಗ
ತಾವೇ ರಚಿಸಿದ ಪೇಂಟಿಂಗ್‌ಗಳನ್ನು ಕಲಾ ಗ್ಯಾಲರಿಯಲ್ಲಿ ತೂಗುಹಾಕಿ ಗ್ರಾಹಕರಿಗೆ ಹೇಗೆ ಕಂಡೀತು ಎಂದು ನೋಡುತ್ತಿರುವ ಹಂಪಿ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು
ತಾವೇ ರಚಿಸಿದ ಪೇಂಟಿಂಗ್‌ಗಳನ್ನು ಕಲಾ ಗ್ಯಾಲರಿಯಲ್ಲಿ ತೂಗುಹಾಕಿ ಗ್ರಾಹಕರಿಗೆ ಹೇಗೆ ಕಂಡೀತು ಎಂದು ನೋಡುತ್ತಿರುವ ಹಂಪಿ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು 
ಸುರಪುರ ಸಾಂಪ್ರದಾಯಿಕ ಕಲೆಯನ್ನು ರಚಿಸಿ ತೋರಿಸುತ್ತಿರುವ ಹಂಪಿ ವಿಶ್ವವಿದ್ಯಾಲಯದ ದೃಶ್ಯಕಲಾ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.