ಹರಪನಹಳ್ಳಿ : ಆರೋಗ್ಯ ಮತ್ತು ಸಂಸ್ಕಾರಕ್ಕೆ ಸಮನಾಗಿರುವ ಶಿಕ್ಷಣದಿಂದ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಜಗಳೂರು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಪಟ್ಟಣದ ಅಡವಿಹಳ್ಳಿ ರಸ್ತೆಯಲ್ಲಿರುವ ವಿದ್ಯಾನಿಧಿ ಅಕಾಡೆಮಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಂ ಜೊಲ್ಲಿಫಿಕೇಷನ್ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ʼವಿದ್ಯಾವಂತರಲ್ಲಿಯೇ ನೈತಿಕ ಶಿಕ್ಷಣ, ಸಂಸ್ಕಾರದ ಕೊರತೆ ಇದ್ದಾಗ, ಸಮಾಜದಲ್ಲಿ ಅಸ್ತವ್ಯಸ್ತತೆ ಸಂಭವಿಸುತ್ತವೆ. ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆಸಬೇಕು. ಕಷ್ಟಗಳನ್ನು ಅನುಭವಿಸಿದ ವಿದ್ಯಾರ್ಥಿ, ಭವಿಷ್ಯದಲ್ಲಿ ಉನ್ನತ ಗುರಿ ಸಾಧಿಸುತ್ತಾನೆ. ಅಂತಹ ಶಕ್ತಿ, ಸಾಮರ್ಥ್ಯ, ಆತ್ಮವಿಶ್ವಾಸ ಹೆಚ್ಚಿಸುವ ಜವಬ್ದಾರಿ ಇಂದಿನ ಶಿಕ್ಷಕರ ಮೇಲಿದೆ. ಅಂಕ ಗಳಿಕೆ ಫಲಿತಾಂಶಕ್ಕಿಂತ ಸಾಮಾಜಿಕ ಪ್ರಜ್ಞೆ ಬೆಳೆಸಿ, ಆದರ್ಶ ಪ್ರಜೆಗಳನ್ನಾಗಿ ನಿರ್ಮಾಣ ಮಾಡಿ ಎಂದರು.
ಜಿಂದಾಲ್ ವಿದ್ಯಾಮಂದಿರದ ಪ್ರಾಂಶುಪಾಲರಾದ ಈಶ್ವರಿ ಕೆ. ಶರ್ಮ ಮಾತನಾಡಿ, ಪ್ರಶ್ನೆ ಕೇಳುವ ಗುಣದಿಂದ ಮಕ್ಕಳಲ್ಲಿ ಬುದ್ದಿಶಕ್ತಿ ಹೆಚ್ಚಾಗುತ್ತದೆ. ಇದರ ಜೊತೆಗೆ ಶಿಕ್ಷಕರು ಇಂದಿನ ಮಕ್ಕಳಲ್ಲಿ ಮೌಲ್ಯ ಶಿಕ್ಷಣ ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದರು.
ಪತ್ರಕರ್ತ ಅಜಿತ್ ಹನುಮಕ್ಕನವರ್, ವಿದ್ಯಾನಿಧಿ ಅಕಾಡೆಮಿ ಅಧ್ಯಕ್ಷ ದೊಡ್ಮನಿ ಚನ್ನನಗೌಡ ಮಾತನಾಡಿದರು. ಉಪಾಧ್ಯಕ್ಷ ಎಂ.ಜೆ.ಎಂ.ಶಿವಕುಮಾರ, ಕಾರ್ಯದರ್ಶಿ ಎಚ್.ವಾಗೀಶ, ನಿರ್ದೇಶಕರಾದ ಚನ್ನಬಸಪ್ಪ, ಮಂಜುನಾಥ, ಎಚ್.ಎಂ.ಶಿವಕುಮಾರ, ವಾಗೀಶ ಇಟಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.