ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ಬಿರುಸಿನ ಮಳೆಯಾಗಿದೆ.
ಸೋಮವಾರ ರಾತ್ರಿ ತುಂತುರು ಮಳೆಯಾಗಿತ್ತು. ಮಂಗಳವಾರ ಬೆಳಿಗ್ಗೆ ಏಳು ಗಂಟೆಗೆ ಜಿಟಿಜಿಟಿ ಮಳೆ ಆರಂಭಗೊಂಡಿತು. ಬಳಿಕ ಅರ್ಧ ಗಂಟೆಗೂ ಹೆಚ್ಚು ಸಮಯ ಬಿರುಸಿನಿಂದ ಸುರಿಯಿತು. ಈಗಲೂ ಜಿಟಿಜಿಟಿ ಮಳೆ ಮುಂದುವರೆದಿದೆ.
ಮೂರು ಗಂಟೆಯಿಂದ ಸತತ ಸುರಿಯುತ್ತಿರುವ ಮಳೆಯಿಂದ ಶಾಲಾ-ಕಾಲೇಜು, ದೈನಂದಿನ ಕೆಲಸಗಳಿಗೆ ಹೋಗುವವರಿಗೆ ತೊಂದರೆಯಾಯಿತು. ಕೆಲವರು ಕೊಡೆ ಹಿಡಿದುಕೊಂಡು ಕೆಲಸಕ್ಕೆ ಹೋಗುತ್ತಿರುವುದು ಕಂಡು ಬಂತು.
ತಾಲ್ಲೂಕಿನ ಹೊಸೂರು, ನಾಗೇನಹಳ್ಳಿ, ಬಸವನದುರ್ಗ, ಹಂಪಿ, ಕಮಲಾಪುರ ಸುತ್ತಮುತ್ತ ಮಳೆಯಾಗಿರುವುದು ವರದಿಯಾಗಿದೆ.
ಸತತ ಮಳೆಗೆ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ಅಧಿಕ ತೇವಾಂಶದಿಂದ ಗದ್ದೆಯಲ್ಲೇ ಬೆಳೆ ಕೊಳೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.