ಹೊಸಪೇಟೆ: ‘ಶಾಸಕ ರೇಣುಕಾಚಾರ್ಯನ ತಮ್ಮನ ಮಗನ ಸಂಶಯಾಸ್ಪದ ಸಾವಿನ ಬಗ್ಗೆ ರಾಜ್ಯದ ಪೊಲೀಸರೇ ತನಿಖೆ ನಡೆಸುವರು. ಸಿಒಡಿಗೆ ಒಪ್ಪಿಸುವುದಿಲ್ಲ’ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಹಂಪಿಯಿಂದ ಮೃತ್ತಿಕೆ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಪೊಲೀಸರು ದಕ್ಷರಿದ್ದಾರೆ. ಅವರೇ ತನಿಖೆ ನಡೆಸುವರು.ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಅಕ್ಟೋಬರ್ 31ರ ರಾತ್ರಿ ನಾಪತ್ತೆಯಾಗಿದ್ದರು. ಅವರನ್ನು ಎಲ್ಲ ಕಡೆ ಹುಡುಕುವ ಕೆಲಸ ನಡೆದಿತ್ತು. ಅಷ್ಟರಲ್ಲೇ ಕಾಲುವೆಯಲ್ಲಿ ಬಿದ್ದ ಕಾರೊಳಗೆ ಅವರ ಶವ ಪತ್ತೆಯಾಗಿದೆ.
ಈಗಾಗಲೇ ಮರಣೋತ್ತರ ಪರೀಕ್ಷೆ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳದಿಂದ ಸಾಕ್ಷ್ಯಾಧಾರ ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.
ಬಹಳ ಸಮಯದಿಂದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಗಿರಲಿಲ್ಲ. ಈಗ ಮಾಡಲಾಗುತ್ತಿದೆ. ಇದರಲ್ಲಿ ಹೊಸತೇನು ಇಲ್ಲ. ರೂಟೀನ್ ವರ್ಗಾವಣೆ ಇದು.ಉದ್ದೇಶಪೂರ್ವಕವಾಗಿ ಯಾರನ್ನೂ ವರ್ಗಾವಣೆ ಮಾಡುತ್ತಿಲ್ಲ. ರಾಜ್ಯದಲ್ಲಿ ಹೆಚ್ಚು ಕಮ್ಮಿ ಎಲ್ಲ ಅಧಿಕಾರಿಗಳು ದಕ್ಷರಾಗಿದ್ದಾರೆ. ಹೀಗಾಗಿಯೇ ಕರ್ನಾಟಕದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಿದೆ ಎಂದರು.
ಶಿವಮೊಗ್ಗದಲ್ಲಿ ಈ ಹಿಂದೆ ಬಹಳ ಅಪರಾಧಿ ಕೃತ್ಯಗಳು ನಡೆಯುತ್ತಿದ್ದವು. ಕೊತ್ವಾಲ್ ರಾಮಚಂದ್ರ, ಹೆಬ್ಬೆಟ್ಟು ಮಂಜು ಸೇರಿದಂತೆ ಅನೇಕರ ಬ್ರೀಡಿಂಗ್ ಸೆಂಟರ್ ಆಗಿತ್ತು. ಈಗ ಅಪರಾಧಗಳು ಬಹಳ ಕಡಿಮೆ ಆಗಿವೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.