ADVERTISEMENT

ಹೂವಿನಹಡಗಲಿ: ‘ಜಲ್ ಹಿ ಅಮೃತ್’: ₹25 ಲಕ್ಷ ಪ್ರೋತ್ಸಾಹಧನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 5:00 IST
Last Updated 11 ನವೆಂಬರ್ 2025, 5:00 IST
ಹೂವಿನಹಡಗಲಿ ಹೊರ ವಲಯದಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ
ಹೂವಿನಹಡಗಲಿ ಹೊರ ವಲಯದಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ   

ಹೂವಿನಹಡಗಲಿ: ಇಲ್ಲಿನ ಪುರಸಭೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ನಿರ್ವಹಣೆ ಹಾಗೂ ಬಹು ಹಂತದ ಸಂಸ್ಕರಣಾ ವಿಧಾನವನ್ನು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿ, ಉತ್ತಮ ರ‍್ಯಾಂಕಿಂಗ್‌ ನೀಡಿದೆ.

ಪಟ್ಟಣದ ನವಲಿ ರಸ್ತೆಯ 10 ಎಕರೆ ಪ್ರದೇಶದಲ್ಲಿ ಕೆಂದ್ರ, ರಾಜ್ಯ, ಸ್ಥಳೀಯ ಸಂಸ್ಥೆಯ ಅನುದಾನ ಕ್ರೂಢೀಕರಿಸಿ ₹1.83 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಲಾಗಿದೆ. ಒಳ ಚರಂಡಿ ಯೋಜನೆ ಅನುಷ್ಠಾನ ಬಳಿಕ 2016ರಲ್ಲಿ ಈ ಘಟಕ ಚಾಲನೆಗೊಂಡಿದೆ.

ಪಟ್ಟಣದ ಒಳಚರಂಡಿಯ ತ್ಯಾಜ್ಯದ ನೀರು ಘಟಕದ ಸಂಗ್ರಹಣಾ ತೊಟ್ಟಿ ಸೇರುತ್ತದೆ. ಅಲ್ಲಿಂದ ತೇವ ಬಾವಿಗೆ ಪಂಪ್ ಮಾಡಿ ಪ್ರಾಥಮಿಕ, ದ್ವಿತೀಯ ಹಂತದ ಘಟಕಗಳಲ್ಲಿ ಸಂಸ್ಕರಿಸಲಾಗುತ್ತದೆ. ನಂತರ ಕ್ಲೋರಿನೇಷನ್ ಘಟಕದಲ್ಲಿ ರಾಸಾಯನಿಕ, ಜೈವಿಕ ಪ್ರಕ್ರಿಯೆ ನಡೆಸಿ ಪರಿಸರಕ್ಕೆ ಹಾನಿಕಾರಕವಲ್ಲದ ಸಂಸ್ಕರಿಸಿದ ತ್ಯಾಜ್ಯದ ನೀರನ್ನು ಹೊರಗೆ ಹರಿಸಲಾಗುತ್ತದೆ. ಬಹು ಹಂತದ ಸಂಸ್ಕರಣೆಯನ್ನು ಮಾಲಿನ್ಯ ನಿಯಂತ್ರಣಾ ಮಂಡಳಿಯ ಒಸಿಎಎಂಎಸ್ ಸಾಫ್ಟವೇರ್‌ನಲ್ಲಿ ನೇರ ನಿಗಾವಣೆ ವ್ಯವಸ್ಥೆ ಅಳವಡಿಸಲಾಗಿದೆ.

ADVERTISEMENT

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯು ಘಟಕದ ಐದು ವರ್ಷಗಳ ನಿರ್ವಹಣೆಯನ್ನು ಪುಣೆಯ ‘ಆದಿಶ್ರೀ’ ಕಂಪನಿಗೆ ವಹಿಸಿದೆ. ಇಲ್ಲಿನ ಪುರಸಭೆ ಮೇಲ್ವಿಚಾರಣೆಯಲ್ಲಿ ಉತ್ತಮ ನಿರ್ವಹಣೆ ನಡೆದಿದೆ.

ಕೇಂದ್ರ ಸರ್ಕಾರದ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಅಧಿಕಾರಿಗಳ ತಂಡ ಕಳೆದ ಫೆಬ್ರವರಿಯಲ್ಲಿ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ, ಅಳವಡಿಸಿರುವ ಸಂಸ್ಕರಣಾ ವಿಧಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸುಧಾರಿತ ಕ್ಲೋರಿನೇಷನ್ ಘಟಕ ಅಳವಡಿಸಿಕೊಳ್ಳಲು ₹25 ಲಕ್ಷ ಪ್ರೋತ್ಸಾಹಧನ ನೀಡಿದೆ.

ಕೇಂದ್ರ ಸರ್ಕಾರ ಪ್ರೋತ್ಸಾಹಧನ ನೀಡಿರುವುದು ಸಂತಸ ತಂದಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಇನ್ನಷ್ಟು ಉತ್ತಮ ನಿರ್ವಹಣೆ ಮಾಡುತ್ತೇವೆ
ಎಚ್.ಇಮಾಮ್‌ಸಾಹೇಬ್, ಮುಖ್ಯಾಧಿಕಾರಿ, ಪುರಸಭೆ ಹೂವಿನಹಡಗಲಿ

ರಾಜ್ಯದ 33 ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಬಹುಮಾನ ರೂಪದಲ್ಲಿ ಪ್ರೋತ್ಸಾಹ ಧನ ಘೋಷಣೆ ಮಾಡಿದ್ದು, ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ನಗರಸಭೆ ಮತ್ತು ಹೂವಿನಹಡಗಲಿ ಪುರಸಭೆ ವಿಶೇಷ ನಿಧಿ ಗಿಟ್ಟಿಸಿಕೊಂಡಿವೆ.

ಹೂವಿನಹಡಗಲಿ ಎಸ್‌ಟಿಪಿಯಲ್ಲಿರುವ ಪ್ರಾಥಮಿಕ ದ್ವಿತೀಯ ಹಂತದ ಸಂಸ್ಕರಣಾ ಘಟಕಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.