ADVERTISEMENT

ವಿಜಯನಗರ | ಶೇ 1 ಮೀಸಲಾತಿ ಇಲ್ಲವೇ ಭಿಕ್ಷೆಗೆ ಅವಕಾಶ ಕೊಡಿ

ಅಲೆಮಾರಿ ಸಮುದಾಯಗಳಿಂದ ಕಲಾ ಪ್ರದರ್ಶನ ಮೂಲಕ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 4:19 IST
Last Updated 29 ಆಗಸ್ಟ್ 2025, 4:19 IST
ಪ್ರತ್ಯೇಕ ಶೇ 1ರ ಒಳಮೀಸಲಾತಿಗೆ ಆಗ್ರಹಿಸಿ ಗುರುವಾರ ಹೊಸಪೇಟೆಯಲ್ಲಿ ಅಲೆಮಾರಿ ಸಮುದಾಯದವರಿಂದ ಪ್ರತಿಭಟನೆ ನಡೆದು ಜಿಲ್ಲಾಢಳಿತಕ್ಕೆ ಮನವಿ ಸಲ್ಲಿಸಲಾಯಿತು  –ಪ್ರಜಾವಾಣಿ ಚಿತ್ರ
ಪ್ರತ್ಯೇಕ ಶೇ 1ರ ಒಳಮೀಸಲಾತಿಗೆ ಆಗ್ರಹಿಸಿ ಗುರುವಾರ ಹೊಸಪೇಟೆಯಲ್ಲಿ ಅಲೆಮಾರಿ ಸಮುದಾಯದವರಿಂದ ಪ್ರತಿಭಟನೆ ನಡೆದು ಜಿಲ್ಲಾಢಳಿತಕ್ಕೆ ಮನವಿ ಸಲ್ಲಿಸಲಾಯಿತು  –ಪ್ರಜಾವಾಣಿ ಚಿತ್ರ   

ಹೊಸಪೇಟೆ: ಅಲೆಮಾರಿಗಳಿಗೆ ಶೇ 1ರ ಪ್ರತ್ಯೇಕ ಒಳಮೀಸಲಾತಿ ಕೊಡಿ ಇಲ್ಲವೇ ಭಿಕ್ಷೆ, ಬೇಟೆಯಾಡಲು ಅವಕಾಶ ನೀಡಿ ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ನೂರಾರು ಮಂದಿ ತಮ್ಮ ಸಾಂಪ್ರದಾಯಿಕ ವೇಷಭೂಷಣಗಳು, ಕಲಾ ಪ್ರದರ್ಶನ ಮೂಲಕ ಪ್ರತಿಭಟನೆ ನಡೆಸಿದರು.

ಜಿಲ್ಲಾ ಅಲೆಮಾರಿ ಒಕ್ಕೂಟದ ಅಧ್ಯಕ್ಷ ಸಣ್ಣ ಮಾರೆಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತದಿಂದ ತಹಶೀಲ್ದಾರ್‌ ಕಚೇರಿಯವರೆಗೆ ನಡೆಯಿತು. ಸಾಂಪ್ರದಾಯಿಕ ವೇಷ ತೊಟ್ಟ ಕಲಾವಿದರು ಮೆರವಣಿಗೆ ಉದ್ದಕ್ಕೂ ತಮ್ಮ ಕಲೆ ಪ್ರದರ್ಶಿಸಿದರು. ತಹಶೀಲ್ದಾರ್ ಕಚೇರಿಯ ಸಮೀಪಕ್ಕೆ ಬಂದಾಗ ಮಳೆ ಬಿರುಸಿನಿಂದ ಸುರಿಯಿತು. ಹೀಗಾಗಿ ಅಲ್ಲಿ ಇನ್ನಷ್ಟು ಹೊತ್ತು ಕಲಾ ಪ್ರದರ್ಶನ ನೀಡಿ ಪ್ರತಿಭಟಿಸುವ ಯೋಜನೆ ಕೈಬಿಟ್ಟು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಪ್ರತಿಭಟನೆ ಕೊನೆಗೊಳಿಸಲಾಯಿತು.

ಬೀದಿಯಲ್ಲಿ ಸಂಪ್ರದಾಯ: ಅಲೆಮಾರಿಗಳ ಜೀವನ ಪದ್ಧತಿ, ಅವರ ಕಲೆ, ಅವರು ನಡೆಸುವ ಅತಂತ್ರ ಬದುಕಿನ ಚಿತ್ರಣವನ್ನು ಬೀದಿಗಳಲ್ಲಿ ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವ ಪ್ರಯತ್ನ ನಡೆಯಿತು. ಸುಡುಗಾಡು ಸಿದ್ಧರ ಕಲೆ, ಹಗಲು ವೇಷಗಾರರ ಕಲೆ, ಸಿಂಧೊಳ್ಳ ಸಮಾಜದವರ ಕಲೆ, ಹಕ್ಕಿಪಿಕ್ಕಿಗಳು, ಬುಡುಬುಡಿಕೆಯವರ ಜೀವನ ಸಹಿತ ಹಲವಾರು ಅಲೆಮಾರಿ ಸಮುದಾಯಗಳ ಜೀವನ ವೃತ್ತಾಂತ ಪ್ರತಿಭಟನೆಯ ಮೂಲಕವೇ ಪರಿಚಯವಾಯಿತು.

ADVERTISEMENT

ಒತ್ತಾಯ: ಒಳಮೀಸಲಾತಿಯನ್ನು ಜಾರಿ ಮಾಡುವ ಒತ್ತಡದಲ್ಲಿ ಸರ್ಕಾರ ಅಲೆಮಾರಿಗಳಂತಹ ಧ್ವನಿ ಇಲ್ಲದವರ ಧ್ವನಿ ಅಡಗಿಸಿದ್ದು ಅಕ್ಷಮ್ಯ.  ಅಲೆಮಾರಿ ಸಮುದಾಯಗಳಿಗೆ ಮರಣ ಶಾಸನವನ್ನು ಸರ್ಕಾರ ಬರೆದುಬಿಟ್ಟಿದೆ, ಪ್ರತ್ಯೇಕ ಶೇ 1ರಷ್ಟು ಮೀಸಲಾತಿ ನೀಡುವ ಮೂಲಕ ನ್ಯಾಯ ನೀಡಲೇಬೇಕು ಎಂದು ಒಕ್ಕೊರಲ ಒತ್ತಾಯ ಮಾಡಲಾಯಿತು.

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಸರ್ಕಾರದ ಸಮೀಕ್ಷೆಯ ದತ್ತಾಂಶಗಳ ಹಿನ್ನೆಲೆಯಲ್ಲಿ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳ ಸಮೂಹಕ್ಕೆ ಪ್ರವರ್ಗ-ಎ ರಲ್ಲಿ ವರ್ಗೀಕರಿಸಿರುವುದು ನ್ಯಾಯಸಮ್ಮತವಾಗಿತ್ತು. ಹೀಗಾಗಿ 59 ಸೂಕ್ಷ್ಮ ಮತ್ತು ಅಲೆಮಾರಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ-ಎ ರಲ್ಲಿಯೇ ಇರಿಸಿ ಶೇ 1ರಷ್ಟು ಒಳ ಮೀಸಲಾತಿ ನಿಗದಿಗೊಳಿಸಬೇಕು ಎಂದು ಆಗ್ರಹಿಸಿಸಲಾಯಿತು.

ಮುಖಂಡರಾದ ಕಿನ್ನೂರಿ ಶೇಖಪ್ಪ, ಜೆ.ರಮೇಶ, ಶೇಖರ ಚನ್ನದಾಸರ, ಚೌಡಪ್ಪ, ಮಲ್ಲೇಶಪ್ಪ, ಮಂಜಣ್ಣ, ರಾಜಪ್ಪ, ಸಣ್ಣ ಅಜ್ಜಯ್ಯ, ಶಿವಕುಮಾರ್  ಇದ್ದರು.

59 ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಆರೋಪ ವಿವಿಧ ಕಲೆ, ಪರಂಪರೆ ಬೀದಿಗಳಲ್ಲಿ ಪ್ರಕಟ ಬಲಾಢ್ಯ ಸಮುದಾಯಗಳು ಮೀಸಲಾತಿಯಲ್ಲಿ ಹೆಚ್ಚಿನ ಪಾಲು–ಬೇಸರ

ಶಾಶ್ವತವಾಗಿ ವಂಚನೆ ಅಲೆಮಾರಿಗಳನ್ನು ಬಂಜಾರ ಭೋವಿ ಕೊರಮ ಕೊರಚ ಸಮಯದಾಯಗಳ ಜೊತೆಗೆ ಸೇರಿಸಿ ಶೇ 5ರಷ್ಟು ಮೀಸಲಾತಿಯನ್ನು ನಿಗದಿ ಮಾಡಿರುವುದರಿಂದ ಅಲೆಮಾರಿ ಸಮುದಾಯಗಳು ಶಾಶ್ವತವಾಗಿ ಮೀಸಲಾತಿಯಿಂದ ವಂಚಿತವಾಗಲಿವೆ. ಸಾವಿರಾರು ವರ್ಷಗಳಿಂದ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿಯೇ ಬದುಕಿ ಬಂದ ಈ ಅನಾಥ ಸಮುದಾಯಗಳಿಗೆ ಸ್ವಾತಂತ್ರ್ಯಾನಂತರ ಸಂವಿಧಾನಬದ್ಧ ಸೌಲಭ್ಯಗಳು ಇನ್ನೂ ದೊರಕಿಲ್ಲ ಎಂದು ಪ್ರತಿಭಟನಕಾರರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.