ADVERTISEMENT

ಹೊಸಪೇಟೆ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಲ್ಲೆ, 9 ಜನ ನ್ಯಾಯಾಂಗ ಬಂಧನಕ್ಕೆ

ತಪ್ಪಿಸಿಕೊಂಡ ಇಬ್ಬರು ಪೊಲೀಸರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 12:16 IST
Last Updated 3 ಸೆಪ್ಟೆಂಬರ್ 2022, 12:16 IST
ಪೊಲೀಸರು ವಶಪಡಿಸಿಕೊಂಡಿರುವ ಡಿ.ಜೆ, ಟ್ರ್ಯಾಕ್ಟರ್‌
ಪೊಲೀಸರು ವಶಪಡಿಸಿಕೊಂಡಿರುವ ಡಿ.ಜೆ, ಟ್ರ್ಯಾಕ್ಟರ್‌   

ಹೊಸಪೇಟೆ (ವಿಜಯನಗರ ಜಿಲ್ಲೆ): ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಾಗಲಾಪುರ ತಾಂಡಾದಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಒಂಬತ್ತು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಗದುಗಿನ ಇಬ್ಬರು ಪೊಲೀಸರು ತಪ್ಪಿಸಿಕೊಂಡಿದ್ದಾರೆ.

‘ಮೂರನೇ ದಿನದ ಗಣೇಶ ವಿಸರ್ಜನೆಯ ವೇಳೆ ವಿನಾಯಕ ಮಿತ್ರ ಮಂಡಳಿಯವರು ಡಿ.ಜೆ. ಬಳಸಿದ್ದಾರೆ. ಮೆರವಣಿಗೆ ನಂತರ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾದಾಗ ಮಂಡಳಿಯವರು ಹಾಗೂ ಕೆಲ ಗ್ರಾಮಸ್ಥರು ಹಂಪಸಾಗರ ಉಪಠಾಣೆಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಠಾಣೆಯ ಸಿಬ್ಬಂದಿ ರಾಮಾಂಜಿನಿ ಹಾಗೂ ಸಿದ್ದೇಶ್‌ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ರಾಮಾಂಜಿನಿ ಅವರಿಗೆ ಗಾಯಗಳಾಗಿವೆ. ಕೃತ್ಯದಲ್ಲಿ ಭಾಗಿಯಾದ ಗದಗ ಜಿಲ್ಲೆಯ ಪೊಲೀಸ್‌ ಸಿಬ್ಬಂದಿ ಮಂಜು ನಾಯ್ಕ, ಪರಶು ನಾಯ್ಕ ತಪ್ಪಿಸಿಕೊಂಡಿದ್ದಾರೆ. ಇಬ್ಬರು ರೈಲ್ವೆ ಪೊಲೀಸರಾ ಅಥವಾ ನಮ್ಮ ಇಲಾಖೆಯ ಪೊಲೀಸರೇ ಎನ್ನುವುದು ಖಚಿತವಾಗಬೇಕಿದೆ. 2 ಟ್ರ್ಯಾಕ್ಟರ್‌, ಡಿ.ಜೆ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ತಿಳಿಸಿದ್ದಾರೆ.

ತಂಬ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.