ADVERTISEMENT

ಸಂದಿಗ್ಧತೆಯಲ್ಲೇ ಆತ್ಮಸಾಕ್ಷಿಯ ಕೆಲಸ ಮಾಡಿ: ಗವಿಸಿದ್ಧೇಶ್ವರ ಸ್ವಾಮೀಜಿ ಸಲಹೆ

ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ: ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 6:22 IST
Last Updated 7 ಜುಲೈ 2025, 6:22 IST
ಹೊಸಪೇಟೆಯಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು–  ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು–  ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ‘ಪತ್ರಕರ್ತರು ಸಂದಿಗ್ಧತೆಯಲ್ಲಿಯೇ ಕೆಲಸ ಮಾಡಬೇಕಾದುದು ಅನಿವಾರ್ಯ, ಆದರೆ ಇಲ್ಲೂ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದರಷ್ಟೇ ತಮ್ಮ ವೃತ್ತಿಗೆ ನ್ಯಾಯ ಕೊಡಲು ಸಾಧ್ಯವಾಗುತ್ತದೆ’ ಎಂದು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಭಾನುವಾರ ಇಲ್ಲಿ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ‍‘ಪತ್ರಕರ್ತರ ವೃತ್ತಿಯೇ ತಕ್ಕಡಿಯಂತದ್ದು. ಒಂದು ತಟ್ಟೆಯಲ್ಲಿ ಬಂಗಾರ ಇರಲಿ, ಇನ್ನೊಂದು ತಟ್ಟೆಯಲ್ಲಿ ಕಲ್ಲು ಇರಲಿ, ಸಮಾನವಾಗಿ ತೂಗುವ ಕೆಲಸವನ್ನು ತಕ್ಕಡಿ ಮಾಡುತ್ತದೆ, ಅದರಂತೆಯೇ ಪತ್ರಕರ್ತರೂ ಕೆಲಸ ಮಾಡಬೇಕಾಗುತ್ತದೆ’ ಎಂದರು.

‘ಕತ್ತಲೆಯನ್ನು ಹೊಡೆಯಲು ಆಗುವುದಿಲ್ಲ, ಕತ್ತಲೆಯನ್ನು ಹೊಡೆದೋಡಿಸಬೇಕಿದ್ದರೆ ದೀಪ ಹಚ್ಚುವ ದಾರಿಯನ್ನಷ್ಟೇ ನಾವು ತುಳಿಯಬೇಕಾಗುತ್ತದೆ. ನಾನು ಎಲ್ಲವನ್ನೂ ಸಾಧಿಸಬಲ್ಲೆ ಎಂಬ ಹುಂಬತನವೂ ಒಳ್ಳೆಯದಲ್ಲ, ನನಗೆ ಇಷ್ಟೇ ಸಾಕು ಎಂಬ ಸಂಕುಚಿತ ಭಾವವೂ ಉತ್ತಮವಲ್ಲ. ಎರಡನ್ನೂ ನಿಭಾಯಿಸುವ ಗುಣವನ್ನು ಪತ್ರಕರ್ತ ಬೆಳೆಸಿಕೊಳ್ಳಬೇಕು’ ಎಂದು ಶ್ರೀಗಳು ನುಡಿದರು.

ADVERTISEMENT

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ‘ಗ್ರಾಮೀಣ ಪತ್ರಕರ್ತರಿಗೆ ಬಸ್‌ ಪಾಸ್‌ ನೀಡಲು ಶ್ರಮಿಸಿದ್ದು, ಮಾಧ್ಯಮ ಸಂಜೀವಿನಿ ಜಾರಿಗೊಳಿಸಿದ್ದು ದೊಡ್ಡ ಕೆಲಸ, ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಸಂಘ ಕೃತಜ್ಞತೆ ಸಲ್ಲಿಸುತ್ತದೆ’ ಎಂದರು.

ಸಂಘದಿಂದ ಅನಧಿಕೃತ ಪತ್ರಕರ್ತರನ್ನು ಹೊರ ಹಾಕಬೇಕು ಎಂದ ಅವರು, ಹೊಸಪೇಟೆಯಲ್ಲಿ ಪತ್ರಿಕಾ ಭವನಕ್ಕೆ ಸೂಕ್ತ ನಿವೇಶನ ಒದಗಿಸಲು ಜಿಲ್ಲಾಡಳಿತ ನೆರವಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ ಮಾತನಾಡಿ, ‘ಪತ್ರಕರ್ತರ ಭವನ ನಿರ್ಮಾಣದ ಪ್ರಸ್ತಾವ ಹೆಚ್ಚುವರಿ ಕಾರ್ಯದರ್ಶಿ ಮಟ್ಟದಲ್ಲಿ ಇದ್ದು, ಶೀಘ್ರ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರವಾಗಲಿದೆ, ಪತ್ರಕರ್ತರಿಗೆ ವಸತಿ ಕಲ್ಪಿಸುವ ಕುರಿತು ಗಂಭೀರ ಚಿಂತನೆ ನಡೆಸಲಾಗುವುದು’ ಎಂದರು.

‘ಹುಡಾ’ ಅಧ್ಯಕ್ಷ ಎಚ್.ಎನ್.ಎಫ್‌. ಮೊಹಮ್ಮದ್ ಇಮಾಮ್ ನಿಯಾಜಿ ಸಹ ನಿವೇಶನ ವಿಚಾರವನ್ನು ಸಚಿವರ ಗಮನಕ್ಕೆ ತಂದು ತಮ್ಮಿಂದಾದ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌., ನಗರಸಭೆ ಅಧ್ಯಕ್ಷ ಎನ್‌.ರೂಪೇಶ್ ಕುಮಾರ್‌ ಮಾತನಾಡಿದರು.

ಜಿಲ್ಲೆಯ ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಹಾಗೂ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯಪ್ಪ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ, ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ, ತಾಲ್ಲೂಕು ಘಟಕದ ಅಧ್ಯಕ್ಷರು ಇದ್ದರು.

ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ತಲಾ ₹10 ಸಾವಿರ ನಗದು ಬಹುಮಾನ ನೀಡಿದ ಸಚಿವ ಜಮೀರ್‌ ಗಮನ ಸೆಳೆದ ಶಾಲಾ ಮಕ್ಕಳ ತೊಗಲು ಬೊಂಬೆಯಾಟ
ನಾವು ಮಾಡುವ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸ ಅಷ್ಟಾಗಿ ಆಗುತ್ತಿಲ್ಲ ಇನ್ನು ಮುಂದಾದರೂ ಪತ್ರಕರ್ತರ ಆ ಧೋರಣೆ ಬದಲಾಗಲಿ
ಎಚ್‌.ಆರ್.ಗವಿಯಪ್ಪ ಶಾಸಕ

ಸ್ಮರ್ಧಾತ್ಮಕ ಪರೀಕ್ಷೆಗೆ ಆಕರ ಎಂಬುದನ್ನು ಮರೆಯದಿರಿ

‘ಪತ್ರಿಕೆ ಕೇವಲ ಸುದ್ದಿ ಓದಿ ಎಸೆಯುವ ರದ್ದಿಯಲ್ಲ ಅದು ಕೆಎಎಸ್‌ ಐಎಎಸ್‌ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಕರ ಗ್ರಂಥಗಳು ಎಂಬುದನ್ನು ಮರೆಯಬೇಡಿ ಹೀಗಾಗಿ ಪೂರ್ಣ ಮಾಹಿತಿ ಪಡೆದೇ ಸುದ್ದಿ ಬರೆಯಬೇಕು. ಜಿಲ್ಲಾಡಳಿತಕ್ಕೆ ಪತ್ರಕರ್ತರು ಕಣ್ಣು ಕಿವಿ ಇದ್ದಂತೆ ಲೋಕದ ಡೊಂಕ ನೀವು ತಿದ್ದುವ ಭರದಲ್ಲಿ ನೀವೇ ಡೊಂಕಾಗಬಾರದು. ಸತ್ಯ ಮತ್ತು ಸಾರ್ವಜನಿಕ ಹಿತಾಸಕ್ತಿ ನಡುವಿನ ಸೂಕ್ಷ್ಮ ಅಂತರವನ್ನು ಅರಿತುಕೊಂಡು ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.