ADVERTISEMENT

ವಿಜಯನಗರ: ತೇರು ಹನುಮಪ್ಪ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 0:34 IST
Last Updated 22 ಫೆಬ್ರುವರಿ 2026, 0:34 IST
ಹೂವಿನಹಡಗಲಿಯಲ್ಲಿ ಶನಿವಾರ ಸಂಜೆ ತೇರು ಹನುಮಪ್ಪ ಸ್ವಾಮಿ ರಥೋತ್ಸವ ಜರುಗಿತು
ಹೂವಿನಹಡಗಲಿಯಲ್ಲಿ ಶನಿವಾರ ಸಂಜೆ ತೇರು ಹನುಮಪ್ಪ ಸ್ವಾಮಿ ರಥೋತ್ಸವ ಜರುಗಿತು   

ಹೂವಿನಹಡಗಲಿ: ಪಟ್ಟಣದಲ್ಲಿ ತೇರು ಹನುಮಪ್ಪ ಸ್ವಾಮಿ ರಥೋತ್ಸವ ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಶ್ರೀರಾಮದೇವಸ್ಥಾನದ ಧರ್ಮಕರ್ತ ರಾಮಸ್ವಾಮಿ ರಾಕೇಶಯ್ಯ, ಚೌಕಿಮಠದ ಗಾಡಿತಾತಾ ಸಾನ್ನಿಧ್ಯದಲ್ಲಿ ರಥಕ್ಕೆ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು.

ವೆಂಕಟರಮಣ ಗೋವಿಂದಾ ಗೋವಿಂದ… ಅಪಾರ ಭಕ್ತರ ಜಯಘೋಷ ಹರ್ಷೋದ್ಗಾರದ ನಡುವೆ ರಥೋತ್ಸವ ಪ್ರಾರಂಭವಾಯಿತು. ಸಮಾಳ, ನಂದಿಕೋಲು ಮಂಗಳ ವಾದ್ಯ, ಜಾಂಜ್ ಮೇಳ ವಿಜೃಂಭಣೆಯ ರಥೋತ್ಸವಕ್ಕೆ ಮೆರುಗು ತಂದಿದ್ದವು.

ADVERTISEMENT

ಪಟ್ಟಣದ ಮುಖ್ಯರಸ್ತೆಯ ಮೂಲಕ ಶ್ರೀರಾಮ ವೃತ್ತದ ಪಾದಗಟ್ಟೆಯವರೆಗೆ ಸಾಗಿ ರಥ ಮೂಲಸ್ಥಳಕ್ಕೆ ಬಂದು ತಲುಪಿತು. ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯಿಂದ ಕೈಮುಗಿದರು. ಶಾಸಕ ಕೃಷ್ಣನಾಯ್ಕ, ತಹಶೀಲ್ದಾರ್ ಕೆ.ಎಂ.ಗುರುಬಸವರಾಜ, ದೇವಸ್ಥಾನ ಸಮಿತಿ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಯು.ಹನುಮಂತಪ್ಪ, ಕೋಡಿಹಳ್ಳಿ ಮುದುಕಪ್ಪ, ಗುರುವಿನ ರಾಜು, ಎಸ್.ಮಲ್ಲಿಕಾರ್ಜುನ, ಹಕ್ಕಂಡಿ ಶಿವನಾಗಪ್ಪ ಭಾಗವಹಿಸಿದ್ದರು.

ದೇವಸ್ಥಾನದಲ್ಲಿ ಬೆಳಿಗ್ಗೆ ಸ್ವಾಮಿಗೆ ಕುಂಕುಮ ಪೂಜೆ, ಎಲೆಪೂಜೆ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರು ಸರದಿಯಲ್ಲಿ ತೆರಳಿ ಸ್ವಾಮಿಯ ದರ್ಶನ ಪಡೆದರು. ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.