ADVERTISEMENT

ಕೆಪಿಎಂಇ ನೋಂದಣಿ ಇಲ್ಲದ ಕ್ಲಿನಿಕ್‌ಗಳಿಗೆ ಸಂಕಷ್ಟ?

ಕಾರಿಗನೂರಿನಲ್ಲಿನ ಕ್ಲಿನಿಕ್‌ ಅನಧಿಕೃತ ದೃಢ– ಇತರ ಕ್ಲಿನಿಕ್‌ಗಳಿಗೂ ಢವಢವ

ಎಂ.ಜಿ.ಬಾಲಕೃಷ್ಣ
Published 4 ಫೆಬ್ರುವರಿ 2026, 2:10 IST
Last Updated 4 ಫೆಬ್ರುವರಿ 2026, 2:10 IST
ಹೊಸಪೇಟೆಯ ಕಾರಿಗನೂರಿನಲ್ಲಿರುವ ಕ್ಲಿನಿಕ್ ಕಟ್ಟಡ
ಹೊಸಪೇಟೆಯ ಕಾರಿಗನೂರಿನಲ್ಲಿರುವ ಕ್ಲಿನಿಕ್ ಕಟ್ಟಡ   

ಹೊಸಪೇಟೆ (ವಿಜಯನಗರ): ಕಮಲಾಪುರದಲ್ಲಿ ಕೆಲವು ತಿಂಗಳ ಹಿಂದೆ ಕರ್ನಾಟಕ ಖಾಸಗಿ ವೈದ್ಯಕೀಯ ಘಟಕ (ಕೆಪಿಎಂಇ) ಕಾಯ್ದೆಯ ಪ್ರಕಾರ ನಡೆದುಕೊಂಡಿಲ್ಲ ಎಂಬ ಕಾರಣ ಒಡ್ಡಿ ಒಂದು ಕ್ಲಿನಿಕ್ ಬಂದ್‌ ಮಾಡಿಸಿದ ವಿದ್ಯಮಾನ ಹಸಿರಾಗಿರುವಾಗಲೇ, ಕಾರಿಗನೂರಿನಲ್ಲಿ ಸಹ ಕೆಪಿಎಂಇ ನೋಂದಣಿಯೇ ಆಗಿರದ ಕ್ಲಿನಿಕ್ ಒಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರ ಮೂಲಕ ಗೊತ್ತಾಗಿದೆ.

ನಗರಸಭೆಯ 23ನೇ ವಾರ್ಡ್ ಕಾರಿಗನೂರಿನಲ್ಲಿರುವ ಕ್ಲಿನಿಕ್ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಪಿಎಂಇ ನೋಂದಣಿ ಇಲ್ಲದೆ ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಹಕ್ಕು ಅಧಿಕಾರಿ ಅವರು 2025ರ ಸೆಪ್ಟೆಂಬರ್‌ 16ರಂದು ಆರ್‌ಟಿಐ ಕಾರ್ಯಕರ್ತ ಬಸವರಾಜ ಅವರಿಗೆ ಉತ್ತರ ನೀಡಿದ್ದರು. 

ಬಳಿಕ ಬಸವರಾಜ ಜತೆಗೆ ಮಲ್ಲಪ್ಪ, ನಾಗರಾಜ, ಯಲ್ಲಪ್ಪ ಗುಜ್ಜಲ್, ಹುಲುಗಪ್ಪ ಗುಜ್ಜಲ್‌, ನವೀನ್ ಕುಮಾರ್‌ ತಹಶೀಲ್ದಾರ್‌ ಅವರಿಗೆ ದೂರು ನೀಡಿದ್ದರು. ಇದರ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರು ತಾಲ್ಲೂಕು ವೈದ್ಯಾಧಿಕಾರಿ ಅವರಿಂದ ಮಾಹಿತಿ ಕೇಳಿದ್ದರು.  ಅದರಂತೆ ಜನವರಿ 2ರಂದು ಸ್ಥಳಕ್ಕೆ ಭೇಟಿ ನೀಡಿದ್ದ ಟಿಎಚ್‌ಒ ಡಾ.ವಿನೋದ್ ಕುಮಾರ್ ಅವರು, ಕ್ಲಿನಿಕ್‌ನಲ್ಲಿ ರೋಗಿಗಳಿಗೆ ಫಿಸಿಯೊಥೆರಪಿ ಮತ್ತು ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಗಮನಿಸಿದ್ದರು. ಕೆಪಿಎಂಇ ನೋಂದಣಿ ಆಗದ ಈ ಕ್ಲಿನಿಕ್ ಅನ್ನು ಮುಚ್ಚಬೇಕು ಎಂದು ಶಿಫಾರಸು ಮಾಡಿ ಡಿಎಚ್‌ಒ ಅವರಿಗೆ ಜನವರಿ 7ರಂದು ಪತ್ರ ಬರೆದಿದ್ದರು.

ADVERTISEMENT

ಜಿಲ್ಲಾಧಿಕಾರಿಗೆ ಶಿಫಾರಸು: ‘ಟಿಎಚ್‌ಒ ಶಿಫಾರಸು ಮಾಡಿರುವುದು ನಿಜ, ಕೆಪಿಎಂಇ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳುವ ಅಧಿಕಾರ ಜಿಲ್ಲಾಧಿಕಾರಿ ಅವರಿಗೆ ಇರುವ ಕಾರಣ ಕ್ಲಿನಿಕ್ ಬಂದ್ ಮಾಡಿಸುವ ನಿಟ್ಟಿನಲ್ಲಿ ಪ್ರಸ್ತಾವವನ್ನು ಅವರ ಮುಂದೆ ಇಟ್ಟಿದ್ದೇವೆ. ನಗರದಲ್ಲಿ ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುವ ಇತರ ಖಾಸಗಿ ಕ್ಲಿನಿಕ್‌ಗಳು ಸಹ ಕೆಪಿಎಂಇ ನೋಂದಣಿಯನ್ನು ತಕ್ಷಣ ಮಾಡಬೇಕು ಎಂಬ ನೋಟಿಸ್‌ಗಳನ್ನು ಈಗಾಗಲೇ ರವಾನಿಸಿದ್ದೇವೆ, ಮುಂದೆ ಅವುಗಳ ವಿರುದ್ಧವೂ ಕ್ರಮ ಜರುಗುತ್ತದೆ’ ಎಂದು ಡಿಎಚ್‌ಒ ಡಾ.ಎಲ್.ಆರ್.ಶಂಕರ್ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಈ ವಿಚಾರ ನನ್ನ ಗಮನಕ್ಕೆ ಇಲ್ಲ, ಇಂತಹ ಕ್ಲಿನಿಕ್‌ಗಳ ಬಗ್ಗೆ ಮಾಹಿತಿ ತರಿಸಿಕೊಂಡು ಸೂಕ್ತ ನಿರ್ಧಾರಕ್ಕೆ ಬರುತ್ತೇವೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಪ್ರತಿಕ್ರಿಯಿಸಿದರು.

ಜಿಲ್ಲಾಸ್ಪತ್ರೆ ಕಟ್ಟಡ ಉದ್ಘಾಟನೆ 13ರಂದು 

ಹಂಪಿ ಉತ್ಸವದ ಆರಂಭದ ದಿನವಾದ ಫೆ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಬುನಾಥಹಳ್ಳಿಯಲ್ಲಿ ನಿರ್ಮಿಸಲಾಗಿರುವ 250 ಹಾಸಿಗೆಗಳ ಜಿಲ್ಲಾಸ್ಪತ್ರೆ ಕಟ್ಟಡವನ್ನು ಉದ್ಘಾಟಿಸುವರು ಎಂದು ಜಿಲ್ದಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸಿಬ್ಬಂದಿ ನೇಮಕ ಪರಿಕರಗಳ ಸರಬರರಾಜು ಆಗಿಲ್ಲ ಅದೆಲ್ಲವೂ ವಿವಿಧ ಹಂತಗಳಲ್ಲಿವೆ ಆದರೆ ಆಸ್ಪತ್ರೆ ಕಟ್ಟಡವನ್ನು ಸಿಎಂ ಅಂದು ಉದ್ಘಾಟಿಸುವರು. ಸೂಕ್ತ ಸೌಲಭ್ಯಗಳು ಲಭ್ಯವಾದ ತಕ್ಷಣ ಆರೋಗ್ಯ ಸೇವೆ ಅಲ್ಲಿ ಆರಂಭವಾಗಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.