ADVERTISEMENT

ವಿಜಯನಗರ: ತುಂಗಭದ್ರಾ ನದಿಗೆ ಲಕ್ಷ ಕ್ಯುಸೆಕ್‌ ನೀರು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 8:57 IST
Last Updated 7 ಆಗಸ್ಟ್ 2022, 8:57 IST
   

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಹೆಚ್ಚಳವಾಗಿರುವುದರಿಂದ ನದಿಗೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಭಾನುವಾರ ಹರಿಸಲಾಯಿತು.

1633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1631.89 ಅಡಿ ನೀರಿನ ಸಂಗ್ರಹವಿದೆ. 1,09,214 ಕ್ಯುಸೆಕ್‌ ಒಳಹರಿವು ದಾಖಲಾಗಿದ್ದು, 1.10 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ 30 ಗೇಟ್‌ಗಳನ್ನು ತೆರೆಯಲಾಗಿದೆ. 20 ಗೇಟ್‌ಗಳನ್ನು ತಲಾ 2.50 ಅಡಿ, ಹತ್ತು ಗೇಟ್‌ಗಳನ್ನು 1.50 ಅಡಿ ಮೇಲಕ್ಕೆತ್ತಿ ನದಿಗೆ ನೀರು ಬಿಡಲಾಗುತ್ತಿದೆ. 10,653 ಕ್ಯುಸೆಕ್‌ ನೀರು ಕಾಲುವೆಗಳಿಗೆ ಹರಿಸಲಾಗುತ್ತಿದೆ.

ಹಲವು ದಿನಗಳಿಂದ ಹಂಪಿ ಸ್ನಾನಘಟ್ಟ, ಕರ್ಮ ಮಂಟಪ, ಪುರಂದರದಾಸರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥ ಭಾಗಶಃ ಮುಳುಗಿದ್ದವು. ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸುತ್ತಿರುವುದರಿಂದ ಎಲ್ಲ ಸ್ಮಾರಕಗಳು ಸಂಪೂರ್ಣ ಮುಳುಗಡೆಯಾಗಿವೆ. ರಾಮ–ಲಕ್ಷ್ಮಣ ದೇವಸ್ಥಾನದ ಪರಿಸರಕ್ಕೆ ನೀರು ನುಗ್ಗಿದೆ.

ADVERTISEMENT

ನೆಲಕ್ಕುರುಳಿದ ಮರ:ಸತತ ಬಿರುಗಾಳಿ ಮಳೆಗೆ ಹಂಪಿ ರಥಬೀದಿಯ ಸಾಲುಮಂಟಪದ ಬಳಿ ಭಾನುವಾರ ಬೃಹತ್‌ ಮರ ಬೇರುಸಮೇತ ನೆಲಕ್ಕುರುಳಿದೆ. ಸಾಲು ಮಂಟಪಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.